ಕಡಬ (ಉಪ್ಪಿನಂಗಡಿ): ತಾಲ್ಲೂಕಿನ ಮುಸ್ಲಿಂ ಯುವತಿಯು ತನ್ನ ಗೆಳತಿ ಹಿಂದೂ ಯುವತಿಯನ್ನು ಮನೆಗೆ ಕರೆತಂದಿದ್ದಾಗಮನೆಗೆ ಬಂದು ದಾಂದಲೆ ನಡೆಸಿದ ಪ್ರಕರಣದ ಕುರಿತು ಸಂತ್ರಸ್ತ ಮುಸ್ಲಿಂ ಯುವತಿ ಪೊಲೀಸರಿಗೆ ದೂರು ನೀಡಿದ್ದು, ನಾಲ್ವರು ಯುವಕರ ವಿರುದ್ಧ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ನಾನು ಉಪ್ಪಿನಂಗಡಿಯಲ್ಲಿ ಟೈಲರ್ ಕೆಲಸ ಮಾಡಿಕೊಂಡಿದ್ದೆ. ನನ್ನ ಸ್ನೇಹಿತೆ ಕಾವ್ಯ ಅವರ ಅಕ್ಕ ಗರ್ಭಿಣಿಯಾಗಿದ್ದು ಆಕೆಗೆ ಬಿರಿಯಾನಿ ತಿನ್ನುವ ಆಸೆ ವ್ಯಕ್ತಪಡಿಸಿದ್ದರು. ಕಾವ್ಯ ಮತ್ತು ನಾನು ಬಿರಿಯಾನಿ ತೆಗೆದುಕೊಂಡು ಹೋಗುವ ಸಲುವಾಗಿ ರಿಕ್ಷಾದಲ್ಲಿ ಮನೆಗೆ ಬರುತ್ತಿರುವಾಗ ಆರೋಪಿಗಳಾದ ಸುದರ್ಶನ್ ಗೆಲ್ಗೋಡಿ, ಕೆ. ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ, ಕೆ.ಪ್ರಸಾದ್ ಕೊಲ್ಯ ಹಾಗೂ ಇತರರು ಕಾರು ಮತ್ತು ಬೈಕ್ಗಳಲ್ಲಿ ಹಿಂಬಾಲಿಸಿಕೊಂಡು ನನ್ನ ಮನೆಗೆ ಬಂದಿದ್ದರು. ಅವಾಚ್ಯ ಶಬ್ದಗಳಿಂದ ನಿಂದಿಸಿ ಕೊಲೆ ಬೆದರಿಕೆವೊಡ್ಡಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಕೊಯಿಲ ಗ್ರಾಮದ ಮಜಲಕ್ಕೆಯ ಸಂಶೀನಾ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಈ ಯುವಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆಯೂ ಯುವತಿ ಒತ್ತಾಯಿಸಿದ್ದಾರೆ.
ಸುದರ್ಶನ್ ಗೆಲ್ಗೋಡಿ, ಕೆ.ಪ್ರಶಾಂತ್ ಕೊಲ್ಯ, ತಮ್ಮು ಕಲ್ಕಡಿ, ಕೆ. ಪ್ರಸಾದ್ ಕೊಲ್ಯ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ನಾಲ್ವರು ಸಂಘ ಪರಿವಾರದ ಸಂಘಟನೆಗೆ ಸೇರಿದವರು ಎಂದು ಗೊತ್ತಾಗಿದೆ.
‘ಪ್ರಕರಣದ ಎಲ್ಲಾ ಆಯಾಮಗಳನ್ನು ಪರಿಶೀಲಿಸುತ್ತಿದ್ದೇವೆ. ತನಿಖೆ ಪ್ರಗತಿಯಲ್ಲಿದೆ’ ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.