ADVERTISEMENT

ಕಾಲೇಜು ಕ್ಯಾಂಪಸ್‌ನಲ್ಲಿ ತಪಾಸಣೆ: ಡಿಸಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 4:56 IST
Last Updated 3 ಡಿಸೆಂಬರ್ 2021, 4:56 IST
   

ಮಂಗಳೂರು: ರೂಪಾಂತರಿ ಓಮೈಕ್ರಾನ್ ತಳಿಯ ವೈರಾಣು ರಾಜ್ಯದ ಇಬ್ಬರು ವ್ಯಕ್ತಿಗಳಲ್ಲಿ ಪತ್ತೆಯಾದ ಬೆನ್ನಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಕೋವಿಡ್ ನಿಯಮಗಳನ್ನು ಮತ್ತಷ್ಟು ಬಿಗಿಗೊಳಿಸಿದೆ.

ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ. ಕಾಲೇಜು ಕ್ಯಾಂಪಸ್‌ನಲ್ಲಿ ಹೆಚ್ಚು ತಪಾಸಣೆ ಮಾಡಲಾಗುತ್ತಿದೆ. ಪಾಸಿಟಿವ್ ಪ್ರಕರಣದ ಹೆಚ್ಚು ಮಾದರಿಗಳನ್ನು ಜೆನೋಮಿಕ್ ಸಿಕ್ವೆನ್ಸಿಂಗ್ ಪರೀಕ್ಷೆಗೆ ಕಳುಹಿಸುವ ಮೂಲಕ ಜಿಲ್ಲೆಯಲ್ಲಿ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ತಿಳಿಸಿದ್ದಾರೆ.

ಸೋಂಕು ಹೆಚ್ಚಿರುವ ನಾಲ್ಕು ದೇಶಗಳಿಂದ ಬಂದಿದ್ದ ನಾಲ್ವರ ಮಾದರಿಗಳನ್ನು ಪರೀಕ್ಷೆ ಕಳುಹಿಸಲಾಗಿತ್ತು. ಎಲ್ಲರ ವರದಿಗಳೂ ನೆಗೆಟಿವ್ ಬಂದಿವೆ. ಪ್ರತಿ 150 ಪಾಸಿಟಿವ್ ಪ್ರಕರಣಗಳಲ್ಲಿ ಒಂದು ಮಾದರಿಯನ್ನು ಓಮೈಕ್ರಾನ್ ವೈರಾಣು ಪರೀಕ್ಷೆಗೆ (ಜೆನೋಮಿಕ್ ಸಿಕ್ವೆನ್ಸಿಂಗ್) ಕಳುಹಿಸಬೇಕಾಗಬಹುದು. ಆದರೆ, ಜಿಲ್ಲಾಡಳಿತವು ಪ್ರತಿ 50 ಪಾಸಿಟಿವ್ ಪ್ರಕರಣದ ಒಂದು ಮಾದರಿಯನ್ನು ಈ ಪರೀಕ್ಷೆಗೆ ಕಳುಹಿಸಲು ಯೋಚಿಸಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ADVERTISEMENT

ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಸೇರಿದಂತೆ ಬುಧವಾರ ಜಿಲ್ಲೆಯಲ್ಲಿ ಒಟ್ಟು 8,686 ಜನರ ಗಂಟಲು ದ್ರವದ ಮಾದರಿ ಪರೀಕ್ಷಿಸಲಾಗಿದೆ. ನ.25ರಿಂದ ಡಿ.1ರವರೆಗೆ ಜಿಲ್ಲೆಯ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ 12,786 ರ್‍ಯಾಟ್ ಮತ್ತು 29,336 ಆರ್‌ಟಿಪಿಸಿಆರ್ ಸೇರಿ ಒಟ್ಟು 42,122 ಜನರ ಗಂಟಲು ದ್ರವದ ಮಾದರಿ ಪರೀಕ್ಷಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.