ಸಾವು
(ಪ್ರಾತಿನಿಧಿಕ ಚಿತ್ರ)
ಪುತ್ತೂರು: ಹೆರಿಗೆಯ ಬಳಿಕ ತೀವ್ರ ರಕ್ತಸ್ರಾವ ಉಂಟಾಗಿ ನೆಟ್ಟಣಿಗೆ ಮುಡ್ನೂರು ಗ್ರಾಮದ ಕರ್ನೂರು ನಿವಾಸಿಯಾದ ಬಾಣಂತಿ ಮೃತಪಟ್ಟಿದ್ದು, ಈ ಕುರಿತು ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಕನೂರು ಅಳಿಕೆ ನಿವಾಸಿ ಮೊಹಮ್ಮದ್ ಬಶೀರ್ ಕೆ.ಎಂ.ಅವರ ಪತ್ನಿ ಆಯಿಷತ್ ಸೌಜಾನ (26) ಮೃತಪಟ್ಟವರು.
ಮೊಹಮ್ಮದ್ ಬಶೀರ್ ಅವರ ಪತ್ನಿ ಆಯಿಷತ್ ಸೌಜಾನ ಅವರನ್ನು ಎರಡನೇ ಹೆರಿಗೆಗಾಗಿ ಕಾಸರಗೋಡಿನ ಸರ್ಕಾರಿ ಆಸ್ಪತ್ರೆಗೆ ಜೂನ್ 27ರಂದು ದಾಖಲಿಸಿದ್ದರು. ಜುಲೈ 1ರಂದು ಮುಂಜಾನೆ ಆಯಿಷತ್ ಸೌಜಾನ ಅವರು ಸಾಮಾನ್ಯ ಹೆರಿಗೆಯ ಮೂಲಕ ಗಂಡು ಶಿಶುವಿಗೆ ಜನ್ಮ ನೀಡಿದ್ದರು. ಆ ಬಳಿಕ ಆಕೆಗೆ ತೀವ್ರ ರಕ್ತಸ್ರಾವ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಕಾಸರಗೋಡು ಸರ್ಕಾರಿ ಆಸ್ಪತ್ರೆಯ ವೈದ್ಯರ ಸಲಹೆಯ ಮೇರೆಗೆ ಆಕೆಯನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಆದರೆ ಆಯಿಷತ್ ಸೌಜಾನ ಅವರು ಚಿಕಿತ್ಸೆಗೆ ಸ್ಪಂದಿಸದೆ ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಆಯಿಷತ್ ಸೌಜಾನ ಅವರ ಸಹೋದರ ಸುಳ್ಯ ತಾಲ್ಲೂಕಿನ ಜಾಲ್ಸೂರಿನ ಸಣ್ಣಕದಿಕೆ ನಿವಾಸಿ ಶಿಹಾಬುದ್ದೀನ್ ಅವರು ನೀಡಿರುವ ದೂರಿನಂತೆ ಸಂಪ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿಶು ಆರೋಗ್ಯವಾಗಿರುವುದಾಗಿ ತಿಳಿದು ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.