
ಸುಳ್ಯ: ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಲಾಗುವುದು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.
ತಾಲ್ಲೂಕು ರಚನೆಗೊಂಡು 60 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ಸುಳ್ಯ ಷಷ್ಟ್ಯಬ್ಧ ಆಚರಣೆಯಲ್ಲಿ ಅವರು ಮಾತನಾಡಿದರು.
ಮುಂದಿನ ಅಮೃತ ಮಹೋತ್ಸವ ಆಚರಣೆ ವೇಳೆಗೆ ಆಗಬೇಕಿರುವ ಎಲ್ಲಾ ಕೆಲಸಗಳ ಪಟ್ಟಿಗಳ ಜತೆಗೆ ಸರ್ವ ಪಕ್ಷಗಳ ಮುಖಂಡರು ಸಹಕಾರವಿದ್ದಾಗ ವೇಗದ ಅಭಿವೃದ್ಧಿ ಸಾಧ್ಯವಾಗುತ್ತದೆ. ಇಂದಿನ ಡಿಜಿಟಲ್ ಯುಗದಲ್ಲಿ ಒಂದು ಹಳ್ಳಿಗೆ ಒಂದು ಟವರ್ ಆಗಬೇಕಿದೆ ಎಂದು ಬ್ರಿಜೇಶ್ ಚೌಟ ಹೇಳಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ಶಾಸಕರು ಮತ್ತು ಸಂಸದರಿಗೆ ಸಂಪೂರ್ಣ ಸಹಕಾರ ನೀಡುವೆ. ಸರ್ವರನ್ನು ಸೇರಿಸಿಕೊಂಡು ಆಚರಣೆಯ ಮೂಲಕ ಅಭಿವೃದ್ಧಿಗೆ ಮುಂದಾಗಿರುವುದು ಇದು ರಾಜ್ಯದಲ್ಲೆ ಇದು ಮಾದರಿ ಕಾರ್ಯಕ್ರಮ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಸುಳ್ಯ ತಾಲ್ಲೂಕು ರಚನೆಗೊಂಡು 60 ವರ್ಷ ಪೂರ್ಣವಾಗಿದ್ದು ಇದರ ಭಾಗವಾಗಿ ಷಷ್ಟ್ಯಬ್ಧ ಆಚರಣೆಯ ಸಂದರ್ಭದಲ್ಲಿ ಸುಳ್ಯಕ್ಕೆ ಅಗತ್ಯವಾಗಿ ಆಗಬೇಕಾದ ಕೆಲಸ ಕಾರ್ಯಗಳ ಪಟ್ಟಿಗಳನ್ನು ಸಿದ್ದಪಡಿಸಿ ಸರ್ವ ಪಕ್ಷಗಳನ್ನು ಒಳಗೊಂಡು ತಾಲ್ಲೂಕು ಅಭಿವೃದ್ಧಿ ಚಿಂತನೆಯೊಂದಿಗೆ ಮುಂದಡಿ ಇಡಲಾಗುತ್ತಿದೆ. ಸರ್ವರು ಕೈ ಜೋಡಿಸಿದಲ್ಲಿ ಸುಳ್ಯದ ಅಭಿವೃದ್ಧಿಗೆ ವೇಗ ಸಿಗಲಿದೆ ಎಂದು ತಿಳಿಸಿದರು.
ಬಿಜೆಪಿ ಮುಖಂಡ ಎಸ್.ಅಂಗಾರ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಸಂಸದರು ಮಾಜಿ ಶಾಸಕರು, ವಿಧಾನಪರಿಷತ್ ಮಾಜಿ ಸದಸ್ಯರು ಹಾಗೂ ತಾಲ್ಲೂಕು ರಚನೆ ಶ್ರಮಿಸಿದ ಕುಟುಂಬದ ಸದಸ್ಯರನ್ನು ಸನ್ಮಾನಿಸಲಾಯಿತು.
ಸುಳ್ಯ ಅಂದು–ಇಂದು ಮುಂದು ವಿಚಾರಗೋಷ್ಠಿಯನ್ನು ಎಂ.ಬಿ ಸದಾಶಿವ, ಭರತ್ ಮುಂಡೋಡಿ, ಸಂತೋಷ್ ಕುತ್ತಮೊಟ್ಟೆ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಮಿಕರ ಕನಿಷ್ಠ ವೇತನಾ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್, ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಎಂ.ಮುಸ್ತಫ, ತಹಶೀಲ್ದಾರ್ ಮಂಜುಳಾ ಎಂ, ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ, ಬಿಜೆಪಿ ಸುಳ್ಯ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ, ಜಾತ್ಯತೀತ ಜನತಾದಳ ಸುಳ್ಯ ತಾಲ್ಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ, ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ, ಮಾಜಿ ಶಾಸಕ ಕೆ.ಕುಶಲ, ಎಒಎಲ್ಇ ಸುಳ್ಯ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ, ಮುಖಂಡರಾದ ನಿತ್ಯಾನಂದ ಮುಂಡೋಡಿ, ಸಮಿತಿ ಕಾರ್ಯಾಧ್ಯಕ್ಷ ಎಸ್.ಎನ್.ಮನ್ಮಥ, ಪದ್ಮಶ್ರೀ ಗಿರೀಶ್ ಭಾರದ್ವಾಜ್, ಪ್ರಧಾನ ಕಾರ್ಯದರ್ಶಿ ಹರೀಶ್ ಬಂಟ್ವಾಳ್, ಸಂಚಾಲಕರಾದ ರಾಧಾಕೃಷ್ಣ ಬೊಳ್ಳೂರು, ಹರೀಶ್ ಕಂಜಿಪಿಲಿ, ಸಹ ಸಂಚಾಲಕ ಸಂತೋಷ್ ಕುತ್ತಮೊಟ್ಟೆ, ಕೋಶಾಧಿಕಾರಿ ಜಾಕೆ ಸಂತೋಷ್, ಸಂಘಟನಾ ಕಾರ್ಯದರ್ಶಿ ವೆಂಕಟ್ ದಂಬೆಕೋಡಿ, ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ,ಪಿ.ಎಸ್.ಗಂಗಾಧರ, ಉಪಾಧ್ಯಕ್ಷ ಜಾನ್ ವಿಲಿಯಂ ಲಸ್ರಾದೋ ಉಪಸ್ಥಿತರಿದ್ದರು.
ಕಾರ್ಯದರ್ಶಿ ದಿನೇಶ್ ಮಡಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಾಧ್ಯಕ್ಷ ಎಸ್.ಎನ್.ಮನ್ಮಥ ಸ್ವಾಗತಿಸಿದರು. ಶಿವಪ್ರಸಾದ್ ಆಲೆಟ್ಟಿ ಮತ್ತು ಶಶಿಧರ ಎಂ.ಜೆ ನಿರೂಪಿಸಿ, ಸಂತೋಷ್ ಜಾಕೆ ವಂದಿಸಿದರು.
ಇದೇ ಸಂದರ್ಭದಲ್ಲಿ ಸುಳ್ಯ ತಾಲ್ಲೂಕಿನ ಜನಪ್ರಣಾಳಿಕೆಯನ್ನು ಶಾಸಕರು ಮತ್ತು ಸಂಸದರಿಗೆ ನೀಡಲಾಯಿತು. ಪ್ರಮುಖವಾಗಿ ಸುಳ್ಯ-ಸುಬ್ರಹ್ಮಣ್ಯ ಸುಳ್ಯ- ಬೆಳ್ಳಾರೆ ಕುಂಬ್ರ-ನಿಂತಿಕಲ್ ದರ್ಬೆ-ಸುಬ್ರಹ್ಮಣ್ಯ ರಸ್ತೆಗಳನ್ನು ಚತುಷ್ಪಥ ರಸ್ತೆಗಳಾಗಿ ಮೇಲ್ದರ್ಜೆಗೇರಿಸುವುದು ಕಾಞಂಗಾಡ್-ಕಾಣಿಯೂರು ರೈಲು ಮಾರ್ಗ ಮತ್ತು ಮಂಗಳೂರು-ಪುತ್ತೂರು- ಸುಳ್ಯ-ಮಡಿಕೇರಿ-ಮೈಸೂರು ರೈಲು ಮಾರ್ಗ ಅತ್ಯುತ್ತಮ ಕ್ರೀಡಾ ಶಾಲೆ ಕ್ರೀಡಾ ಸಂಕೀರ್ಣ ನಿರ್ಮಾಣ ಹಾಗೂ ಹೆಲಿಪ್ಯಾಡ್ ನಿರ್ಮಾಣ ಕೈಗಾರಿಕಾ ಕೇಂದ್ರ ಪ್ರವಾಸೋದ್ಯಮ ಸೇರಿ ಇತರೆ ಬೇಡಿಕೆಗಳು ಜನ ಪ್ರಣಾಳಿಕೆಯಲ್ಲಿವೆ. ಮೆರವಣಿಗೆ: ಸಭಾ ಕಾರ್ಯಕ್ರಮಕ್ಕೆ ಮುನ್ನ ಲಾಲ್ ಬಹಾದ್ದೂರ್ ಶಾಸ್ತ್ರಿ ವೃತ್ತದಿಂದ ಜಾಥಾದ ಮೂಲಕ ಸಭಾಂಗಣಕ್ಕೆ ತೆರಳಿದರು ಮೆರವಣಿಗೆಗೆ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಕೇರಳದ ಚಂಡೆ ಗೊಂಬೆ ಸ್ತಬ್ಧಚಿತ್ರಗಳು ಜತೆಗೆ ನೂರಾರು ಮಂದಿ ಭಾಗವಹಿಸಿದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.