ಮಂಗಳೂರು: ಎಂಆರ್ಪಿಎಲ್ ತನ್ನ ಸಾಂಸ್ಥಿಕ ಪರಿಸರ ಜವಾಬ್ದಾರಿ ಯೋಜನೆಯಡಿಯಲ್ಲಿ ನಗರದ ವನ್ಯಜೀವಿ ಸಂರಕ್ಷಣೆಗೆ ಆರ್ಥಿಕ ನೆರವು ನೀಡಲು ಒಪ್ಪಂದ ಮಾಡಿಕೊಂಡಿದೆ.
ಎಂಆರ್ಪಿಎಲ್ ಕಂಪನಿಯು ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮ ಜೈವಿಕ ಉದ್ಯಾನದ ವನ್ಯಜೀವಿಗಳನ್ನು ಒಂದು ವರ್ಷದವರೆಗೆ ದತ್ತು ಪಡೆಯವ ಒಪ್ಪಂದಕ್ಕೆ ಸಹಿ ಹಾಕಿದೆ. ರಿಫೈನರಿ ಕಾರ್ಯನಿರ್ವಾಹಕ ನಿರ್ದೇಶಕ ಎಲಾಂಗೊ ಎಂ. ಮತ್ತು ಪಿಲಿಕುಳದ ಕಾರ್ಯನಿರ್ವಹಾಕ ನಿರ್ದೇಶಕ ಗೋಕುಲದಾಸ ನಾಯಕ್ ಮಂಗಳವಾರ ಒಪ್ಪಂದಕ್ಕೆ ಸಹಿ ಹಾಕಿದರು.
ಈ ಸಂದಭದಲ್ಲಿ ಸಂಸ್ಕರಣಾಗಾರದ ನಿರ್ದೇಶಕ ಸಂಜಯ್ ವರ್ಮಾ, ಹಣಕಾಸು ನಿರ್ದೇಶಕಿ ಪೊಮಿಲಾ ಜಸ್ಪಾಲ್, ಮುಖ್ಯ ಜಾಗೃತ ಅಧಿಕಾರಿ ರಾಜೀವ್ ಕುಶ್ವಾ, ಯೋಜನಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಎಚ್.ವಿ. ಪ್ರಸಾದ್ ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಎಚ್.ಜಯಪ್ರಕಾಶ್ ಭಂಡಾರಿ, ಎಂಆರ್ಪಿಎಲ್ ಜಿಜಿಎಂ ಕೃಷ್ಣ ಹೆಗ್ಡೆ, ಪಿಲಿಕುಳದ ಆಡಳಿತಾಧಿಕಾರಿ ಬಾಬು ದೇವಾಡಿಗ ಮತ್ತು ಸುದರ್ಶನ್ ಎಂ.ಎಸ್. ಉಪಸ್ಥಿತರಿದ್ದರು.
ಎಂಆರ್ಪಿಎಲ್ನ ₹4,16,45,145 ಹಣವನ್ನು ಪಿಲಿಕುಳದ 1,200 ವನ್ಯಜೀವಿಗಳಿಗೆ ಆಹಾರ ಒದಗಿಸಲು, ಪಶುವೈದ್ಯಕೀಯ ಸೌಲಭ್ಯ ನೀಡಲು ಮತ್ತು ಪ್ರಾಣಿಗಳಿಗೆ ಔಷಧಿಗಳನ್ನು ಒದಗಿಸಲು ಬಳಸಲಾಗುತ್ತದೆ.
ದೇಶದಾದ್ಯಂತ ಕೋವಿಡ್ -19 ಲಾಕ್ಡೌನ್ ಪರಿಣಾಮ ಪಿಲಿಕುಳದ ಆದಾಯ ಕಡಿಮೆಯಾಗಿದೆ. ಪಿಲಿಕುಳದಲ್ಲಿ ಆಶ್ರಯ ಪಡೆದಿರುವ 1,200 ಕ್ಕೂ ಹೆಚ್ಚು ವನ್ಯಜೀವಿಗಳನ್ನು ರಕ್ಷಿಸಲು ಮತ್ತು ಆಹಾರ ವ್ಯವಸ್ಥೆಗಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಿಫಾರಸಿನ ಮೇರೆಗೆ ಎಂಆರ್ಪಿಎಲ್ ತನ್ನ ಸಿಇಆರ್ ಅಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ.
ದಕ್ಷಿಣ ಕನ್ನಡದ ಸಾಮಾಜಿಕ ಅಗತ್ಯಗಳಿಗೆ ಸ್ಪಂದಿಸುವ ಬದ್ಧತೆಯನ್ನು ಎಂಆರ್ಪಿಎಲ್ ಹೊಂದಿದ್ದು, ಕೋವಿಡ್ -19 ಸಂದರ್ಭದಲ್ಲಿ ಸ್ಯಾನಿಟೈಸರ್, ಮಾಸ್ಕ್, ವೆಂಟಿಲೇಟರ್, ಅಸಂಘಟಿತ ವಲಯ ಕಾರ್ಮಿಕರಿಗೆ ಆಹಾರ ಕಿಟ್ಗಳು, ಆಶ್ರಯ ಕೇಂದ್ರಗಳಿಗೆ 50 ಸಾವಿರ ಕೆ.ಜಿ. ಅಕ್ಕಿ, ವಲಸೆ ಕಾರ್ಮಿಕರಿಗೆ ಆಹಾರ ಮತ್ತು ವಲಸೆ ಕಾರ್ಮಿಕರನ್ನು ಸಾಗಿಸುವ ಬಸ್ಗಳಿಗೆ ಉಚಿತ ಇಂಧನವನ್ನು ಒದಗಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.