ADVERTISEMENT

ಮೂಲ್ಕಿ ಅಗ್ನಿಶಾಮಕ ಠಾಣೆಗೆ ಜಮೀನು ಮಂಜೂರು 

ಕಟ್ಟಡ ನಿರ್ಮಾಣಕ್ಕೂ ಕ್ರಮ: ಶಾಸಕ ಉಮಾನಾಥ ಕೋಟ್ಯಾನ್‌

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:23 IST
Last Updated 13 ಆಗಸ್ಟ್ 2022, 16:23 IST
ಮೂಲ್ಕಿ ಕೋಲ್ನಾಡಿನ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ದಳಕ್ಕೆ ಮೀಸಲಿಟ್ಟ ಪ್ರದೇಶ
ಮೂಲ್ಕಿ ಕೋಲ್ನಾಡಿನ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿಶಾಮಕ ದಳಕ್ಕೆ ಮೀಸಲಿಟ್ಟ ಪ್ರದೇಶ   

ಮೂಲ್ಕಿ: ತಾಲ್ಲೂಕಿನ ಅಗ್ನಿ ಶಾಮಕ ಠಾಣೆಗೆ ಇಲ್ಲಿನ ಕೊಲ್ನಾಡಿನ ಕೈಗಾರಿಕಾ ಪ್ರಾಂಗಣದ ರಾಷ್ಟ್ರೀಯ ಹೆದ್ದಾರಿಯ ಸಮೀಪದಲ್ಲಿ ಒಂದು ಎಕರೆ ಜಮೀನನ್ನು ಸರ್ಕಾರ ಮಂಜೂರು ಮಾಡಿದೆ.

ಮೂಲ್ಕಿಯಲ್ಲಿ ಅಗ್ನಿಶಾಮಕ ಠಾಣೆ ತೆರೆಯುವುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಶಾಸಕ ಉಮಾನಾಥ ಕೋಟ್ಯಾನ ಪ್ರಯತ್ನವು ಫಲ ನೀಡಿದೆ.

ಮೂಲ್ಕಿಗೆ ಅತೀ ಅಗತ್ಯ:ಕೊಲ್ನಾಡಿನ ಕೈಗಾರಿಕಾ ಪ್ರದೇಶದಲ್ಲಿ ಆಗಾಗ್ಗೆ ವರದಿಯಾಗುವ ಅಗ್ನಿ ಅವಘಡ, ಸಸಿಹಿತ್ಲು, ಕೊಳಚಿಕಂಬಳ, ಹೆಜಮಾಡಿ ಸಮುದ್ರ ಪ್ರದೇಶಗಳಲ್ಲಿನ ಅನಾಹುತಗಳಿಗೆ, ಪಕ್ಷಿಕೆರೆ ಪಂಜ, ಕರಿತೋಟ, ಪಾವಂಜೆ, ಕಟೀಲು, ಮಟ್ಟು, ಬಪ್ಪನಾಡು, ನಡಿಕುದ್ರು, ಕರ್ನಿರೆ, ಬಳ್ಕುಂಜೆ, ಅಜಾರು, ಎಕ್ಕಾರು ಪ್ರದೇಶದ ನಂದಿನಿ ಮತ್ತು ಶಾಂಭವಿ ನದಿ ಪ್ರದೇಶಗಳಲ್ಲಿ ನಡೆಯುವ ದುರ್ಘಟನೆಗಳಿಗೆ ಸಮೀಪದಲ್ಲೇ ಅಗ್ನಿ ಶಾಮಕ ಠಾಣೆ ಅತೀ ಅಗತ್ಯವಾಗಿದೆ. ಮೂಲ್ಕಿಯ ಹಲವು ಗುಡ್ಡ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಬೆಂಕಿ ಅವಘಡಕ್ಕೂ ಸಹಕಾರಿಯಾಗಿದೆ.

ADVERTISEMENT

ಪ್ರಸ್ತುತ ತಾಲ್ಲೂಕಿನಲ್ಲಿ ಅಗ್ನಿ ಅವಘಢ ಸಂಭವಿಸಿದರೆ, ದೂರದ ಮೂಡುಬಿದಿರೆ, ಪಣಂಬೂರು ಎನ್ಎಂಪಿಎ, ಕದ್ರಿ ಠಾಣೆಯಿಂದ ಅಗ್ನಿಶಾಮಕ ವಾಹನಗಳು ಬಂದು ಕಾರ್ಯಾಚರಿಸುತ್ತಿವೆ. ಇದರಿಂದ ತಕ್ಷಣ ಸ್ಪಂದನೆ ಅಸಾಧ್ಯವಾಗಿತ್ತು.

ಮೂಲ್ಕಿ ಪಟ್ಟಣ ಪಂಚಾಯಿತಿಯ ಪಕ್ಕದಲ್ಲಿಯೇ ಅಗ್ನಿಶಾಮಕ ಘಟಕ ನಿರ್ಮಿಸುವ ಚಿಂತನೆ ಇತ್ತು. ಆದರೆ ಘಟಕದ ಠಾಣೆ, ನೀರು, ವಸತಿ ಮತ್ತಿತರ ವ್ಯವಸ್ಥೆಗೆ ಆ ನಿವೇಶನ ಸಾಲದಾಗಿತ್ತು. ಈಗ ಮಂಜೂರಾದ ನಿವೇಷನವು ರಾಷ್ಟ್ರೀಯ ಹೆದ್ದಾರಿ ಹಾಗೂ ಕೈಗಾರಿಕಾ ವಲಯವನ್ನು ಹೊಂದಿಕೊಂಡೇ ಇರುವುದರಿಂದ ಸಾಕಷ್ಟು ಸಹಕಾರಿಯಾಗಿದೆ. ಶಾಸಕರು ಶೀಘ್ರವೇ ಕಟ್ಟಡವನ್ನೂ ಮಂಜೂರು ಮಾಡಿಸಬೇಕು ಎಂಬುದು ಸ್ಥಳೀಯರ ಬೇಡಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.