ಮೂಲ್ಕಿ: ಇಲ್ಲಿನ ಕಟೀಲು-ಬಜಪೆಯ ರಾಜ್ಯ ಹೆದ್ದಾರಿ 67 ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನ ಸವಾರರು, ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಇದೇ ರಸ್ತೆಯು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು, ಪ್ರಯಾಣಿಕರು ಸಂಕಷ್ಟದಲ್ಲೇ ಪ್ರಯಾಣಿಸುವಂತಾಗಿದೆ.
ರಾಜ್ಯ ಹೆದ್ದಾರಿ 67ರ ಎಕ್ಕಾರು, ಹುಣ್ಸೆಕಟ್ಟೆ, ಪೆರ್ಮುದೆ, ಭಟ್ಟಕೋಡಿ ಭಾಗದಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿವೆ. ಹೆದ್ದಾರಿಯ ಅಂಚಿನಲ್ಲಿ ಚರಂಡಿ ಇಲ್ಲದೆ ಮಳೆ ನೀರು ಹೆದ್ದಾರಿಯಲ್ಲೇ ಹರಿದಿದ್ದರಿಂದ ಡಾಂಬರು ಕಿತ್ತುಹೋಗಿದೆ.
ಹೊಂಡ ತಪ್ಪಿಸುವ ಸಂದರ್ಭ ಹಲವು ಅಪಘಾತಗಳು ನಡೆದಿವೆ ಎಂದು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.
ಮಳೆಗಾಲ ಆರಂಭಕ್ಕೂ ಮುನ್ನವೇ ಹೆದ್ದಾರಿಯಲ್ಲಿ ಹೊಂಡಗಳಿದ್ದರೂ ಹೆದ್ದಾರಿ ಇಲಾಖೆ ಮುಚ್ಚಲಿಲ್ಲ. ರಾತ್ರಿ ಸಮಯದಲ್ಲಿ ಹೊಂಡಗಳು ಕಾಣಿಸದೆ ಕೆಲವು ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಜನಪ್ರತಿನಿಧಿಗಳೂ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೆ, ಸ್ಪಂದಿಸಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ರಾಕೇಶ್ ಕೋಟ್ಯಾನ್ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.