ಮೂಲ್ಕಿ: ಅಂತರರಾಷ್ಟ್ರೀಯವಾಗಿ ಸರ್ಫಿಂಗ್ ಮೂಲಕ ಖ್ಯಾತಿ ಪಡೆದ ಹಳೆಯಂಗಡಿ ಗ್ರಾಮ ಪಂಚಾಯಿತಿಯ ಸಸಿಹಿತ್ಲು ಮುಂಡ ಬೀಚ್, ಈಗ ಹಂತ ಹಂತವಾಗಿ ಕಡಲಿನ ಒಡಲಿಗೆ ಸೇರುತ್ತಿದೆ.
ಅಪಾಯವನ್ನು ಎದುರಿಸಲು ಪರ್ಯಾಯ ವ್ಯವಸ್ಥೆ ಮಾಡದೇ ಇರುವುದರಿಂದ ಬೀಚ್ ಅಳಿವೆಯಲ್ಲಿ ಭಾರಿ ಪ್ರಮಾಣದಲ್ಲಿ ಕೊರೆತ ಉಂಟಾಗಿ ಸಾಕಷ್ಟು ನಷ್ಟ ಸಂಭವಿಸುತ್ತಿದೆ.
ಎರಡು ಬಾರಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸರ್ಫಿಂಗ್ ಇಲ್ಲಿ ನಡೆದಿತ್ತು. ಈ ಬೀಚ್ ಪ್ರದೇಶ ಇಂದು ನೀರಿನ ಪ್ರವಾಹದಿಂದ ದ್ವೀಪ ಪ್ರದೇಶವಾಗುತ್ತಿದೆ. ಇಲ್ಲಿದ್ದ ಹಲವು ಮರಗಳು, ಪ್ರವಾಸಿಗರಿಗಾಗಿ ಕುಳಿತುಕೊಳ್ಳಲು ಹಾಕಲಾಗಿದ್ದ ಬೆಂಚುಗಳು, ಗ್ರಾಮ ಪಂಚಾಯಿತಿ ನಿರ್ಮಿಸಿದ ಅಂಗಡಿ ಕೋಣೆಗಳು ನದಿ ಪಾಲಾಗಿ ಕಡಲಿನ ಒಡಲಿಗೆ ಸೇರುತ್ತಿದೆ.
ಒಂದು ಅಂಗಡಿ ಕೋಣೆ (ಈಗಾಗಲೇ ಎರಡು ನೀರಿನ ಪಾಲಾಗಿದೆ) ಹಾಗೂ ಸಾರ್ವಜನಿಕ ಶೌಚಾಲಯ ಕಟ್ಟಡ ಮಾತ್ರ ಉಳಿದಿವೆ. ಅಪಾಯ ತಡೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ಅದೂ ನೀರಿಗೆ ಸೇರುವುದು ನಿಶ್ಚಿತ ಎನ್ನುವ ವಾತಾವರಣ ಸೃಷ್ಟಿಯಾಗಿದೆ. ಶಾಂಭವಿ ಮತ್ತು ನಂದಿನಿ ನದಿಗಳ ಸಂಗಮವಾಗಿ ಕಡಲಿಗೆ ಸೇರುವ ಸ್ಥಳವಾಗಿರುವ ಅಳಿವೆಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ಪಶ್ಚಿಮದಲ್ಲಿ ಸಮುದ್ರಕ್ಕೆ ಹಾಕಿರುವ ಶಾಶ್ವತ ತಡೆಗೋಡೆಯನ್ನು ಭೇದಿಸಲು ಮುಂದಾದಂತಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.