ಕಾಸರಗೋಡು: ‘ಸಾಲ ಪಡೆಯಲು ದಾಖಲಾತಿ ಪತ್ರ ನೀಡದಿದ್ದರಿಂದ ನನ್ನ ತಾಯಿಯನ್ನು ಕೊಲೆ ಮಾಡಿದೆ’ ಎಂದು ಆರೋಪಿ ಮಂಜೇಶ್ವರ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ವರ್ಕಾಡಿ ನೆಲ್ಲೆಂಗಿ ನಿವಾಸಿ ಹಿಲ್ಡಾ ಮೊಂತೆರೋ (60) ಅವರನ್ನು ಗುರುವಾರ ಮುಂಜಾನೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಆಕೆಯ ಪುತ್ರ, ಆರೋಪಿ ಮೆಲ್ವಿನ್ ಮೊಂತೆರೋ ಪೊಲೀಸರ ಮುಂದೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
ನಿರುದ್ಯೋಗದಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದೆ. ₹1 ಲಕ್ಷ ಸಾಲ ಪಡೆಯಲು ದಾಖಲೆ ಪತ್ರ ಕೇಳಿದಾಗ ತಾಯಿ ಒಪ್ಪಿರಲಿಲ್ಲ. ಜೊತೆಗೆ ಸಂಬಂಧಿಕರೇ ಆಗಿರುವ ನೆರೆಮನೆಯ ಲೋಲಿತಾ ಅವರೂ ಈ ವಿಚಾರದಲ್ಲಿ ತನ್ನ ತಾಯಿಗೆ ಬೆಂಬಲ ನೀಡಿದ ಕಾರಣ ಅವರನ್ನೂ ಕೊಲೆ ಮಾಡಲು ಯತ್ನಿಸಿದ್ದೆ ಎಂದು ಹೇಳಿಕೆ ನೀಡಿದ್ದಾನೆ.
ಘಟನೆಯ ನಂತರ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಡುಪಿ ಜಿಲ್ಲೆಯ ಬೈಂದೂರು ಠಾಣೆ ವ್ಯಾಪ್ತಿಯ ಕಾಲ್ತೋಡು ಬ್ಯಾತಿಯಾನಿ ಎಂಬಲ್ಲಿ ಪೊಲೀಸರು ಬಂಧಿಸಿದ್ದರು. ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.