ADVERTISEMENT

ಮಂಗಳೂರು: ಕಿನ್ನಿಗೋಳಿಯಲ್ಲಿ ದಂಪತಿಯ ಭೀಕರ ಕೊಲೆ, ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2020, 7:39 IST
Last Updated 29 ಏಪ್ರಿಲ್ 2020, 7:39 IST
ಘಟನಾ ಸ್ಥಳದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಮತ್ತು ಇತರ ಹಿರಿಯ ಅಧಿಕಾರಿಗಳು
ಘಟನಾ ಸ್ಥಳದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷ ಮತ್ತು ಇತರ ಹಿರಿಯ ಅಧಿಕಾರಿಗಳು   
""

ಮಂಗಳೂರು: ನಗರದ ಹೊರವಲಯದ ಮೂಲ್ಕಿ ಪೊಲೀಸ್‌ ಠಾಣೆ ವ್ಯಾಪ್ತಿಯ ಕಿನ್ನಿಗೋಳಿಯಲ್ಲಿ ಬುಧವಾರ ಬೆಳಿಗ್ಗೆ ದಂಪತಿಯನ್ನು ಪಕ್ಕದ ಮನೆಯಾತನೇ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಿನ್ನಿಗೋಳಿ ನಿವಾಸಿಗಳಾದ ವಿನ್ಸೆಂಟ್‌ ಡಿಸೋಜ (50) ಮತ್ತು ಹೆಲಿನ್‌ ಡಿಸೋಜ (45) ಕೊಲೆಯಾದವರು. ನೆರೆಮನೆಯ ಅಲ್ಫಾನ್ಸೋ (50) ಎಂಬಾತ ಕೊಲೆ ಮಾಡಿರುವ ಆರೋಪಿ. ಮೂವರೂ ಕಿನ್ನಿಗೋಳಿಯ ಏಳಿಂಜೆ ನಿವಾಸಿಗಳು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ ತಿಳಿಸಿದ್ದಾರೆ.

ಕೊಲೆಯಾದ ಕುಟುಂಬಕ್ಕೂ ಆರೋಪಿಯ ಕುಟುಂಬಕ್ಕೂ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ವೈಷಮ್ಯ ಇತ್ತು. ಬುಧವಾರ ಬೆಳಿಗ್ಗೆ ದಂಪತಿಯ ಮೇಲೆ ದಾಳಿ ನಡೆಸಿದ ಆರೋಪಿ, ಹಾರೆ ಮತ್ತು ಪಿಕ್ಕಾಸುಗಳಿಂದ ಮನಬಂದಂತೆ ಕೊಚ್ಚಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ADVERTISEMENT

ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಿದ್ದಾರೆ.

ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌.ಹರ್ಷ, ಡಿಸಿಪಿ ಅರುಣಾಂಗ್ಷು ಗಿರಿ, ಮಂಗಳೂರು ಉತ್ತರ ಉಪ ವಿಭಾಗದ ಎಸಿಪಿ ಕೆ.ಯು.ಬೆಳ್ಳಿಯಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿನೀಡಿ, ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.