ADVERTISEMENT

ಬಂಟ್ವಾಳದಲ್ಲಿ ಅಭಿವೃದ್ಧಿ ಪರ್ವ: ನಳಿನ್ ಕುಮಾರ್ ಕಟೀಲ್

ಬಂಟ್ವಾಳ: 2060 ಹಕ್ಕುಪತ್ರ, ಅಂಗವಿಕಲರಿಗೆ ಸಾಧನಾ ಸಲಕರಣೆ ವಿತರಣೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2022, 4:46 IST
Last Updated 25 ಜೂನ್ 2022, 4:46 IST
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಹಕ್ಕುಪತ್ರ ಮತ್ತು ಪ್ರಾಕೃತಿಕ ವಿಕೋಪ ಪರಿಹಾರಧನ ಚೆಕ್ ಹಾಗೂ ಅಂಗವಿಕಲರಿಗೆ ಸಾಧನಾ ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು.
ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಹಕ್ಕುಪತ್ರ ಮತ್ತು ಪ್ರಾಕೃತಿಕ ವಿಕೋಪ ಪರಿಹಾರಧನ ಚೆಕ್ ಹಾಗೂ ಅಂಗವಿಕಲರಿಗೆ ಸಾಧನಾ ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಚಾಲನೆ ನೀಡಿದರು.   

ಬಂಟ್ವಾಳ: ‘ಪ್ರತೀ ಬಾರಿ ಕೋಮು ಸಂಘರ್ಷ, ನಿಷೇಧಾಜ್ಞೆ ಮತ್ತು ಕರ್ಫ್ಯೂ ಮುಂತಾದ ಕಾರಣಕ್ಕೆ ಸುದ್ದಿಯಾಗುತ್ತಿದ್ದ ಬಂಟ್ವಾಳ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಶಾಂತಿ, ಸಹಬಾಳ್ವೆ ಮತ್ತು ಅಭಿವೃದ್ಧಿ ಪರ್ವದ ಆಡಳಿತ ನಡೆಸಿರುವುದು ಇಲ್ಲಿನ ಶಾಸಕರ ಮತ್ತು ಬಿಜೆಪಿಯ ಸಾಧನೆ’ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಇಲ್ಲಿನ ಬಿ.ಸಿ.ರೋಡು ಸ್ಪರ್ಶಾ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿವಿಧ ಹಕ್ಕುಪತ್ರ ಮತ್ತು ಪ್ರಾಕೃತಿಕ ವಿಕೋಪ ಪರಿಹಾರಧನ ಚೆಕ್ ಹಾಗೂ ಅಂಗವಿಕಲರಿಗೆ ಸಾಧನಾ ಸಲಕರಣೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಕಂದಾಯ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಜೀವ ಗಾಂಧಿ ವಸತಿ ನಿಗಮ, ತಾಲ್ಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಭಾಗಿತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಸವ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆಯಡಿ 2,060 ಫಲಾನುಭವಿಗಳಿಗೆ ಕಾರ್ಯಾದೇಶ, 94ಸಿ ಮತ್ತು 94 ಸಿಸಿ ಹಕ್ಕುಪತ್ರ, ಪಾಕೃತಿಕ ವಿಕೋಪದಡಿ ಪರಿಹಾರಧನ ಚೆಕ್, ಅಂಗವಿಕಲರಿಗೆ ಸಾಧನಾ ಸಲಕರಣೆ ವಿತರಿಸಲಾಯಿತು.

ADVERTISEMENT

‘₹55 ಕೋಟಿ ವೆಚ್ಚದಲ್ಲಿ ಪುರಸಭಾ ವ್ಯಾಪ್ತಿಯಲ್ಲಿ ಯುಜಿಡಿ ಯೋಜನೆ ಅನುಷ್ಠಾನ, ₹ 10 ಕೋಟಿ ವೆಚ್ಚದಲ್ಲಿ ಪುಂಜಾಲಕಟ್ಟೆ ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ, ಧಾರ್ಮಿಕ ಕೇಂದ್ರಗಳ ಸಂಪರ್ಕ ರಸ್ತೆ ಸೇರಿದಂತೆ ₹ 16 ಕೋಟಿ ವೆಚ್ಚದಲ್ಲಿ ಗ್ರಾಮೀಣ ರಸ್ತೆ ಅಭಿವೃದ್ಧಿ, ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆ, ಪ್ರತಿ ಮನೆಗೆ ಕುಡಿಯುವ ನಳ್ಳಿ ನೀರು ಪೂರೈಕೆಗೆ ಶಾಸಕರು ಶ್ರಮಿಸಿದ್ದಾರೆ’ ಎಂದು ನಳಿನ್‌ ಕುಮಾರ್‌ ಹೇಳಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಬಂಟ್ವಾಳ ಕ್ಷೇತ್ರದಲ್ಲಿ ಸಂಘರ್ಷದಿಂದ ಶಾಂತಿಯ ಕಡೆಗೆ ಕೊಂಡೊಯ್ಯುವ ಪ್ರಯತ್ನಕ್ಕೆ ಅಡ್ಡಿಪಡಿಸುವ ಯತ್ನ ವಿರೋಧಿಗಳಿಂದ ನಡೆಯುತ್ತಿದೆ’ ಎಂದರು.

ಕಿಯೋನಿಕ್ಸ್ ಅಧ್ಯಕ್ಷ ಕೆ.ಹರಿಕೃಷ್ಣ ಬಂಟ್ವಾಳ, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಬೂಡ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ, ಸಿಡಿಪಿಒ ಗಾಯತ್ರಿ ಕಂಬಳಿ, ಜಿಲ್ಲಾ ನೋಡೆಲ್ ಅಧಿಕಾರಿ ಸವಿತಾ, ತಾಲ್ಲೂಕು ಪಂಚಾಯಿತಿ ಇಒ ರಾಜಣ್ಣ, ಉಪ ತಹಶೀಲ್ದಾರ್ ನವೀನ್ ಬೆಂಜನಪದವು, ಕಲಾವಿದ ಮಂಜು ವಿಟ್ಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.