
ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ಅನ್ನು ನಂತೂರು– ತಲಪಾಡಿವರೆಗೆ ವಿಸ್ತರಣೆ ಮಾಡುವ ಕುರಿತು ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ (ಎನ್ಎಚ್ಎಐ) ಸಿದ್ಧತೆ ನಡೆಸಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಈ ಕುರಿತು ಮಾಹಿತಿ ನೀಡಿದ ಅವರು, ಈ ಹೆದ್ದಾರಿ ಚತುಷ್ಪಥಗೊಂಡ ಸಂದರ್ಭದಲ್ಲೇ 60 ಮೀ ಅಗಲದ ಹೆದ್ದಾರಿ ನಿರ್ಮಿಸುವಷ್ಟು ಭೂಸ್ವಾಧೀನ ಮಾಡಲಾಗಿತ್ತು. ಆದರೆ 45 ಮೀ ಅಗಲದ ಹೆದ್ದಾರಿಯನ್ನು ಮಾತ್ರ ನಿರ್ಮಿಸಲಾಗಿತ್ತು. ನಂತೂರಿನಿಂದ ತಲಪಾಡಿವರೆಗೆ ಹೆದ್ದಾರಿ 60 ಮೀಟರ್ಗೆ ವಿಸ್ತರಣೆಗೊಳ್ಳುವಾಗ ಈ ಮಾರ್ಗದ ಉದ್ದಕ್ಕೂ ಸರ್ವಿಸ್ ರಸ್ತೆ ನಿರ್ಮಿಸುವ ಪ್ರಸ್ತಾವ ಇದೆ ಎಂದು ತಿಳಿಸಿದರು.
'ನಗರದಿಂದ ಉಳ್ಳಾಲ, ಮುಡಿಪು ಕಡೆಗೆ ಹೋಗುವವರಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ಕಾಮಗಾರಿಗೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಮಂಜೂರಾತಿ ನೀಡಲಾಗಿತ್ತು. ಈ ಸೇತುವೆ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದ್ದು, ಡಿಸೆಂಬರ್ ಅಂತ್ಯದೊಳಗೆ ಲೋಕಾರ್ಪಣೆಗೊಳ್ಳಲಿದೆ’ ಎಂದರು.
‘ಮಂಜನಾಡಿಯ ಉರುಮನೆಕೋಡಿಯಲ್ಲಿ ಭೂಕುಸಿತದಿಂದ ಮೂವರನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಕ್ಕೆ ಸರ್ಕಾರದಿಂದ ₹ 15 ಲಕ್ಷ ಪರಿಹಾರ ವಿತರಿಸಲಾಗಿದೆ. ಈ ದುರ್ಘಟನೆ ನಡೆದಾಗ ಸ್ಥಳೀಯ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಸ್ಥಳೀಯರು ರಕ್ಷಣಾ ಕಾರ್ಯಕ್ಕೆ ನೆರವಾಗಿದ್ದರು. ಅವರ ಮನೆ ಹಾನಿಗೊಂಡಿದ್ದಕ್ಕೆ ಪರಿಹಾರ ಸಿಗದಿರುವುದು ಗಮನಕ್ಕೆ ಬಂದಿಲ್ಲ. ನಿಯಮ ಪ್ರಕಾರ ಪರಿಹಾರ ವಿತರಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ತಿಳಿಸಿದರು.
ಉರುಮನೆಕೋಡಿಯಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದರಿಂದಲೇ ಗುಡ್ಡ ಕುಸಿದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಅಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾದಾಗ ಊರಿನ ಜನರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಪ್ರಕೃತಿ ವಿಕೋಪ ಮನುಷ್ಯರ ನಿಯಂತ್ರಣದಲ್ಲಿ ಇಲ್ಲ. ಇಂತಹ ಕಾರಣಕ್ಕೆಲ್ಲ ಎಂಜಿನಿಯರ್ ವಿರುದ್ಧ ಪ್ರಕರಣ ದಾಖಲಿಸುತ್ತಾ ಹೋದರೆ, ಕಾಮಗಾರಿ ನಡೆಸಲು ಯಾರೂ ಮುಂದೆಬರಲಿಕ್ಕಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.