ADVERTISEMENT

ಎನ್‌ಐಟಿಕೆ ಘಟಿಕೋತ್ಸವ 6ಕ್ಕೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2021, 14:59 IST
Last Updated 2 ನವೆಂಬರ್ 2021, 14:59 IST
ಮಂಗಳೂರಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎನ್‌ಐಟಿಕೆಯ ನಿರ್ದೇಶಕ ಪ್ರೊ. ಉಮಾಮಹೇಶ್ವರ ರಾವ್‌ ಮಾತನಾಡಿದರು. ಪ್ರೊ.ಅರುಣ್‌ ಇಸ್ಲೂರ್ ಇದ್ದರು.  –ಪ್ರಜಾವಾಣಿ ಚಿತ್ರ
ಮಂಗಳೂರಿನ ಪತ್ರಿಕಾಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಎನ್‌ಐಟಿಕೆಯ ನಿರ್ದೇಶಕ ಪ್ರೊ. ಉಮಾಮಹೇಶ್ವರ ರಾವ್‌ ಮಾತನಾಡಿದರು. ಪ್ರೊ.ಅರುಣ್‌ ಇಸ್ಲೂರ್ ಇದ್ದರು.  –ಪ್ರಜಾವಾಣಿ ಚಿತ್ರ   

ಮಂಗಳೂರು: ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (ಎನ್‌ಐಟಿಕೆ) 19ನೇ ಘಟಿಕೋತ್ಸವ ನ. 6ರಂದು ಬೆಳಿಗ್ಗೆ 11 ಗಂಟೆಗೆ ವರ್ಚುವಲ್ ವೇದಿಕೆಯಲ್ಲಿ ನಡೆಯಲಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಇಸ್ರೊ ಅಧ್ಯಕ್ಷ ಡಾ. ಕೆ. ಶಿವನ್ ಭಾಗವಹಿಸುವರು ಎಂದುಎನ್‌ಐಟಿಕೆ ನಿರ್ದೇಶಕ ಪ್ರೊ ಕೆ. ಉಮಾಮಹೇಶ್ವರ ರಾವ್ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘120 ಪಿ.ಎಚ್‌ಡಿ, 766 ಪಿಜಿ, 795 ಬಿ.ಟೆಕ್‌ ಸೇರಿದಂತೆ ಒಟ್ಟು 1,681 ಮಂದಿಗೆ ಪದವಿ ಪ್ರದಾನ ಮಾಡಲಾಗುವುದು. ಒಂಬತ್ತು ಬಿ.ಟೆಕ್ ಹಾಗೂ 30 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸಂಸ್ಥೆಯ ಪದಕ ಪ್ರದಾನ ಮಾಡಲಾಗುವುದು.

ಸಂಸ್ಥೆಯ ಹಳೆ ವಿದ್ಯಾರ್ಥಿ, ಉತ್ತರ ಪ್ರದೇಶದ ಬುದ್ಧನಗರದ ಜಿಲ್ಲಾಧಿಕಾರಿ ಹಾಗೂ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಬೆಳ್ಳಿಪದಕ ಪಡೆದ ಸುಹಾಸ್ ಎಲ್. ಯತಿರಾಜ್ ಅವರಿಗೆ ಗೌರವ ಡಾಕ್ಟರೇಟ್ ನೀಡಿ, ಗೌರವಿಸಲಾಗುವುದು’ ಎಂದರು.

ADVERTISEMENT

ಎನ್‌ಐಟಿಕೆಯಲ್ಲಿ ಈ ವರ್ಷ 278 ಕಂಪನಿಗಳು ನೇಮಕಾತಿ ಸಂದರ್ಶನ ನಡೆಸಿವೆ. ಶೇ 92ರಷ್ಟು ಪದವಿ ಹಾಗೂ ಶೇ 52ರಷ್ಟು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೇಮಕಾತಿ ಪತ್ರ ದೊರೆತಿದೆ. ₹80 ಕೋಟಿ ವೆಚ್ಚದಲ್ಲಿ ಸೆಂಟ್ರಲ್ ರಿಸರ್ಚ್ ಫೆಸಿಲಿಟಿ (ಸಿಆರ್‌ಎಫ್‌) ಕೇಂದ್ರ ಸ್ಥಾಪಿಸಲಾಗಿದ್ದು, ದುಬಾರಿ ವೆಚ್ಚದ 45 ಉಪಕರಣಗಳು ಇಲ್ಲಿವೆ. ರಾಷ್ಟ್ರ ಮಟ್ಟದ ಸಂಶೋಧನಾ ಕೇಂದ್ರವಾಗಿ ಇದನ್ನು ಮಾದರಿಯಾಗಿ ರೂಪಿಸಲಾಗಿದೆ ಎಂದು ಹೇಳಿದರು. ಉಪ ನಿರ್ದೇಶಕ ಪ್ರೊ. ಅನಂತ ನಾರಾಯಣ, ಡೀನ್ ವಿದ್ಯಾ ಶೆಟ್ಟಿ, ಹಾಗೂ ಪ್ರೊ. ಅರುಣ್ ಇಸ್ಲೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.