ನರಸಿಂಹರಾಜಪುರ: ಜಲಜೀವನ್ ಮಿಷನ್ ಯೋಜನೆಯಡಿ ಕಳಪೆ ಕಾಮಗಾರಿ ಮಾಡಿದರೆ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಟಿ.ಡಿ.ರಾಜೇಗೌಡ ಎಚ್ಚರಿಕೆ ನೀಡಿದರು.
ಇಲ್ಲಿನ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಅವರು ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ಮಾಡಿದರು. ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಾಗಿ ತಾಲ್ಲೂಕಿಗೆ ₹13 ಕೋಟಿ ಮಂಜೂರಾಗಿದೆ. ಇದರಲ್ಲಿ
₹ 3.50 ಕೋಟಿ ವೆಚ್ಚ ಮಾಡಲಾಗಿದೆ. ಒಂದೇ ಕಂಪನಿಯವರಿಗೆ ಟೆಂಡರ್ ನೀಡಲಾಗಿದೆ. ಕಾಮಗಾರಿ ಮಾಡುವಾಗ ನೀರಿನ ಮೂಲ ಪತ್ತೆ ಮಾಡುತ್ತಿಲ್ಲ. ಕೊಳವೆ ಅಳವಡಿಸುವಾಗ ಕನಿಷ್ಠ 1 ಮೀಟರ್ ಕಾಲುವೆ ಮಾಡಿ ನಂತರ ಅಳವಡಿಸಬೇಕು. ಆದರೆ ಶೇ 90ರಷ್ಟು ಕಾಮಗಾರಿಯಲ್ಲಿ ಈ ಅಳತೆಯ ಕಾಲುವೆ ಮಾಡದೆ ಕೊಳವೆ ಹಾಕಲಾಗಿದೆ ಎಂದರು.
ಕಾಮಗಾರಿ ಪೂರ್ಣಗೊಂಡ ನಂತರ ಕೆಡಿಪಿ ಸದಸ್ಯರೊಂದಿಗೆ ಸ್ಥಳಕ್ಕೆ ಬಂದು ಕಾಮಗಾರಿ ಪರಿಶೀಲಿಸ ಲಾಗುವುದು. ಒಂದು ವೇಳೆ ಕಾಮಗಾರಿ ಕಳಪೆಯಾಗಿದ್ದರೆ ಸಂಬಂಧಪಟ್ಟ ಎಂಜಿನಿಯರ್ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು. ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪ ಮಾಡಲಾಗುವುದು ಎಂದು ಹೇಳಿದರು.
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ನಿಲೇಶ್, ಕೆಡಿಪಿ ಸದಸ್ಯ ಗೋಪಾಲ್ ಶಂಕರಪುರ ಮಾತನಾಡಿ, ‘ಕಳೆದ ವರ್ಷ ನಿರ್ಮಾಣ ಮಾಡಿದ ಸೇತುವೆ ಕಾಮಗಾರಿ ಕಳಪೆಯಾಗಿದೆ. ಮುತ್ತಿನಕೊಪ್ಪ ಮುಖ್ಯರಸ್ತೆ ಮಧ್ಯೆ ದೊಡ್ಡಗುಂಡಿಯಾಗಿದೆ’ ಎಂದು ದೂರಿದರು. ಮುಂದಿನ ಏಳು ದಿನಗಳೊಳಗೆ ಶಂಕರಪುರ ಸೇತುವೆ ವೀಕ್ಷಣೆ ಮಾಡಲಾಗುವುದು ಎಂದು ಟಿ.ಡಿ.ರಾಜೇಗೌಡ ಹೇಳಿದರು.
ಮಳೆ ಕಡಿಮೆಯಾದ ಮೇಲೆ ರಸ್ತೆಯಲ್ಲಿನ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಬೇಕು. ಅಗತ್ಯವಿ ದ್ದಲ್ಲಿ ತುರ್ತು ಗುಂಡಿ ಮುಚ್ಚಲು ಕ್ರಮಕೈಗೊಳ್ಳಬೇ ಕೆಂದು ಎಂಜಿನಿಯರ್ಗೆ ಸೂಚಿಸಿದರು.
ತಹಶೀಲ್ದಾರ್ ವಿಶ್ವನಾಥ್, ತಾಲ್ಲೂಕು ಪಂಚಾಯಿತಿ ಇಒ ಎಸ್.ನಯನಾ, ಡಿಎಫ್ಒ ಲೇಖರಾಜ್ ಮೀನ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.