ಮಂಗಳೂರು: ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತವನ್ನು ಮತ್ತಷ್ಟು ಸದೃಢವಾಗಿ ಕಟ್ಟುವ ಕೆಲಸವಾಗಬೇಕಾಗಿದೆ. ನಮ್ಮ ದೇಶದಲ್ಲಿ ಮತ್ತಷ್ಟು ಏಕತೆ ಮೂಡಿಸುವ ನಿಟ್ಟಿನಲ್ಲಿ ಯುವಜನತೆ ಪಾತ್ರ ಹಿರಿದಾಗಿದ್ದು, ಈ ನಿಟ್ಟಿನಲ್ಲಿ ಎನ್ಎಸ್ಎಸ್ನಂತಹ ಶಿಬಿರಗಳು ಸಾಮಾಜಿಕ ಪ್ರಜ್ಞೆಯನ್ನು ಮೂಡಿಸುತ್ತವೆ ಎಂದು ಎಸ್ಡಿಎಂ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ತಾರಾನಾಥ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಮಹಾವಿದ್ಯಾಲಯದ ವತಿಯಿಂದ ಪಡು ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಸಹಕಾರದೊಂದಿಗೆ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯ ಸೇವಾ ಯೋಜನೆ ಶಿಬಿರದಿಂದ ಸದೃಢ ಮತ್ತು ಸಂಸ್ಕಾರವಂತ ಯುವಜನತೆ ನಿರ್ಮಾಣದ ಕಾರ್ಯ ನಿರಂತರವಾಗಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.
ಸೇವಾಮನೋಭಾವ ಪ್ರಸ್ತುತ ಸಮಾಜದ ಅನಿವಾರ್ಯತೆಯಾಗಿದ್ದು, ಇದರ ಹೆಚ್ಚು ತೊಡಗಿಸಿಕೊಳ್ಳುವ ಕೆಲಸವಾದಾಗ ಯುವಶಕ್ತಿ ತನ್ನಿಂದ ತಾನೆ ಬೆಳೆಯುತ್ತದೆ. ಈ ಮೂಲಕ ಪ್ರತಿಭೆಯ ಅನಾವರಣಕ್ಕೆ ಉತ್ತಮ ವೇದಿಕೆ ಸಿಕ್ಕಂತಾಗುತ್ತದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಆರ್ಎಂಎಕ್ಸ್ ಕಾಂಕ್ರೀಟ್ ಇಂಡಿಯಾ ಪಾಲುದಾರ ಪ್ರತಾಪ್ ಭಂಡಾರಿ, ಎನ್ಎಸ್ಎಸ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಶ್ರೀ ಸಾಯಿ ಮೆಡಿಕಲ್ಸ್ ಮಾಲೀಕ ಭುಜಂಗ ಸುಲಾಯ, ಶ್ರೀ ವಿಘ್ನೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿ ಕೋಶಾಧಿಕಾರಿ ಅರುಣ್ ಬಿತ್ತಪಾದೆ, ಬಿ.ಎಲ್. ಸ್ಟೋರ್ ಬಿತ್ತಪಾದೆ ಮಾಲೀಕ ಉಸ್ಮಾನ್ ಬಿತ್ತಪಾದೆ, ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಪುಷ್ಪರಾಜ್ ಕೆ., ಸಹಯೋಜನಾಧಿಕಾರಿ ಚೈತ್ರಾ, ಸಂಯೋಜಕ ಕೀರ್ತಿರಾಜ್ ಪಡು, ಕಾಲೇಜು ವಿದ್ಯಾರ್ಥಿ ನಾಯಕ ನಿತಿನ್ ಕುವೆಲ್ಲೊ, ಎನ್ಎಸ್ಎಸ್ ಘಟಕ ನಾಯಕ ಕ್ಲಿಂಟನ್ ಕಾರ್ಡೋಜ, ಪ್ರತೀಕ್ಷಾ, ಉಪನ್ಯಾಸಕರಾದ ಬಾಲಿಕಾ, ನರೇಶ್ ಮಲ್ಲಿಗೆಮಾಡು ಉಪಸ್ಥಿತರಿದ್ದರು. ಗಣೇಶ್ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.