ಮಂಗಳೂರು: ಒಡಿಯೂರು ಗುರುದೇವಾನಂದ ಸ್ವಾಮೀಜಿ 60ನೇ ಜನ್ಮದಿನದ ಪ್ರಯುಕ್ತ, ಒಡಿಯೂರುಶ್ರೀ ಷಷ್ಟ್ಯಬ್ಧ ಸಮಿತಿ ನೇತೃತ್ವದಲ್ಲಿ ಗುರುವಂದನೆ ಹಾಗೂ ಷಷ್ಟ್ಯಬ್ಧ ಗೌರವಾರ್ಪಣೆ ಕಾರ್ಯಕ್ರಮವನ್ನುನ.21ರಂದು ಸಂಜೆ 5ಕ್ಕೆ ಇಲ್ಲಿನ ಶಾರದಾ ವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿಯ ಅಧ್ಯಕ್ಷ ಪುಷ್ಪರಾಜ್ ಜೈನ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ‘ಪೌರ ಸನ್ಮಾನದ ಅಂಗವಾಗಿ ಅಂದು ಬೆಳಿಗ್ಗೆ 9ರಿಂದ ಗುರುದತ್ತಾಂಜನೇಯ ಸಂಕೀರ್ತನಾ ಸ್ಪರ್ಧೆ ನಡೆಯಲಿದೆ.ವಿಶ್ವ ಹಿಂದೂ ಪರಿಷತ್ನ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಚಾಲನೆ ನೀಡುವರು. ಕರಾವಳಿಯ 60 ಭಜನಾ ತಂಡಗಳು ಭಾಗವಹಿಸಲಿವೆ ಎಂದರು.
ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಮೂಡುಬಿದಿರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ, ಒಡಿಯೂರು ಗುರುದೇವದತ್ತ ಸಂಸ್ಥಾನದ ಸಾಧ್ವಿ ಮಾತಾನಂದಮಯಿ ಆಶೀರ್ವಚನ ನೀಡುವರು. ಸಂಸದ ನಳಿನ್ಕುಮಾರ್ ಕಟೀಲ್, ಶಾಸಕ ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ, ಕೇಂದ್ರ ಸಮಿತಿ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಪ್ರದೀಪ್ ಕುಮಾರ ಕಲ್ಕೂರ ಭಾಗವಹಿಸುವರು ಎಂದರು.
ವಾಸುದೇವ್ ಆರ್. ಕೊಟ್ಟಾರಿ (ಧಾರ್ಮಿಕ), ಡಾ.ಜಗದೀಶ್ ಶೆಟ್ಟಿ ಬಿಜೈ (ಯೋಗ ಪ್ರಸಾರ), ಸುಧಾಕರ ರಾವ್ ಪೇಜಾವರ (ಸಂಘಟನೆ), ರಾಮ ಮೋಹನ ರೈ (ಶಿಕ್ಷಣ), ಗಣೇಶ್ ಕುಲಾಲ್ (ಸಮಾಜ ಸೇವೆ) ಮತ್ತು ಸುಮತಿ ಶೆಣೈ(ಸಮಾಜ ಸೇವೆ) ಅವರಿಗೆ ‘ಗುರುದೇವಾನಂದಾನುಗ್ರಹ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.
ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಕದ್ರಿ ನವನೀತ್ ಶೆಟ್ಟಿ, ಮಂಗಳೂರು ಸಮಿತಿಯ ಪ್ರಧಾನ ಕಾರ್ಯದರ್ಶಿ ತಾರನಾಥ್ ಶೆಟ್ಟಿ ಬೋಳಾರ, ಸಂಯೋಜಕ ಪ್ರದೀಪ್ ಆಳ್ವ ಕದ್ರಿ, ಕೋಶಾಧಿಕಾರಿ ಎಂ.ಪಿ. ದಿನೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.