ಉಳ್ಳಾಲ: ತಮ್ಮೊಳಗೆ ರಾಣಿ ಅಬ್ಬಕ್ಕಳನ್ನ ಕಾಣುವ ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರು ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಕೊಡುಗೆಯನ್ನು ನೀಡುತ್ತ ಬಂದಿದ್ದಾರೆ. ರಾಣಿ ಅಬ್ಬಕ್ಕಳ ಬಲಿದಾನವು ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತೆಯರಿಗೆ ಸ್ಫೂರ್ತಿ, ಪ್ರೇರಣೆಯಾಗಲಿ ಎಂದು ಬಿಜೆಪಿ ಕರ್ನಾಟಕ ಉಸ್ತುವಾರಿ ರಾಧಾ ಮೋಹನದಾಸ್ ಅಗರ್ವಾಲ್ ಹೇಳಿದರು.
ಉಳ್ಳಾಲಕ್ಕೆ ಭೇಟಿ ನೀಡಿ ಅಬ್ಬಕ್ಕ ವೃತ್ತದ ರಾಣಿ ಅಬ್ಬಕ್ಕಳ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಇದಕ್ಕೂ ಮೊದಲು ಉಳ್ಳಾಲದ ಬಿಜೆಪಿಗರಾದ ಸೀತಾರಾಮ ಬಂಗೇರ ಮತ್ತು ಲಲಿತಾ ಸುಂದರ್ ಅವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ, ಅವರನ್ನು ಗೌರವಿಸಿದರು.
‘ಲಲಿತಾ ಸುಂದರ್ ಅವರು ಇಳಿ ವಯಸ್ಸಿನಲ್ಲೂ ಮೊದಲಿನ ಉತ್ಸಾಹದಲ್ಲೇ ಪಕ್ಷ ಸಂಘಟನೆಯಲ್ಲಿ ಸಕ್ರಿಯರಾಗಿದ್ದಾರೆ. ಪತಿ, ಪುತ್ರ, ಮೊಮ್ಮಗನನ್ನು ಕಳಕೊಂಡ ಅವರು ಸೊಸೆಯ ಜೊತೆಯಲ್ಲಿ ಬದುಕು ಸಾಗಿಸುತ್ತಿದ್ದು, ಜೀವನವನ್ನ ಪಕ್ಷಕ್ಕೆ ಸಮರ್ಪಿಸಿದ್ದಾರೆ. ಅವರ ಸ್ವಂತ ಕಟ್ಟಡದ ಕೊಠಡಿಯನ್ನು ಬಿಜೆಪಿ ಕಾರ್ಯಾಲಯಕ್ಕೆ ನೀಡಿರುವುದು ಅವರಿಗೆ ಪಕ್ಷದ ಮೇಲೆ ಇರುವ ಅಭಿಮಾನವನ್ನು ತೋರಿಸುತ್ತದೆ. ಹಣದಿಂದಲೇ ಎಲ್ಲವನ್ನೂ ಗಳಿಸಲು ಸಾಧ್ಯವಿಲ್ಲ, ಭಾವನೆಗಳೇ ಜಗತ್ತಿನ ದೊಡ್ಡ ಬಂಧನವಾಗಿದೆ ಎಂಬ ಸಂದೇಶವನ್ನು ಅವರು ಸಾರಿದ್ದಾರೆ ಎಂದು ಹೇಳಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಭಾಗೀರಥಿ ಮುರುಳ್ಯ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ, ಉಪಾಧ್ಯಕ್ಷರಾದ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂಜಾ ಪೈ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ಮಂಜುಳಾ ರಾವ್, ಮಂಡಲ ಮಹಿಳಾ ಮೋರ್ಚ ಅಧ್ಯಕ್ಷೆ ಮಾಧವಿ ಉಳ್ಳಾಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಉಪಾಧ್ಯಕ್ಷ ನಿಶಾಂತ್ ಪೂಜಾರಿ, ಮೀನುಗಾರ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಯಶವಂತ ಅಮೀನ್, ಯುವಮೋರ್ಚಾ ಮಂಡಲ ಅಧ್ಯಕ್ಷ ಮುರಳಿ ಕೊಣಾಜೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.