ADVERTISEMENT

ಮಂಗಳೂರು | ಕಾರಾಗೃಹದಲ್ಲಿ ಮತ್ತೆ ಕೈದಿಗಳ ಹೊಡೆದಾಟ

​ಪ್ರಜಾವಾಣಿ ವಾರ್ತೆ
Published 21 ಮೇ 2025, 6:00 IST
Last Updated 21 ಮೇ 2025, 6:00 IST

ಮಂಗಳೂರು: ನಗರದಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಮಂಗಳವಾರ ಮತ್ತೆ ಕೈದಿಗಳ ನಡುವೆ ಹೊಡೆದಾಟ ನಡೆದಿದೆ. ಇದರಿಂದ ಒಬ್ಬ ಕೈದಿ ಗಾಯಗೊಂಡಿದ್ದು, ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

'ಕಾರಾಗೃಹದ ಅಡುಗೆ ಮನೆಯಲ್ಲಿ ಸೋಮವಾರ ಮಧ್ಯಾಹ್ನ  ಕೆಲಸ ಮಾಡುತ್ತಿದ್ದ ವಿಚಾರಣಾಧೀನ ಕೈದಿ  ಜಯಂತ್  ಮತ್ತು ಅಕ್ಷಿತ್ ಪಿ ಅಲಿಯಾಸ್ ಅಶ್ವತ್ಥ್ ಮೇಲೆ ‘ಎ’ ಬ್ಯಾರಕ್‌ನ ವಿಚಾರಣಾಧೀನ ಕೈದಿಗಳಾದ ಅಬ್ದುಲ್ ರೆಹಮಾನ್ ಅಲಿಯಾಸ್‌ ಮುನ್ನಿ, ಉಮರ್ ಸಿಯಾಪ್ ಮತ್ತು ಮಹಮ್ಮದ್ ಜುರೈದ್ ಹಲ್ಲೆ ನಡೆಸಿದ್ದಾರೆ. ಇದನ್ನು ತಿಳಿದ ‘ಬಿ’ ಬ್ಯಾರಕ್‌ನ ಕೈದಿಗಳು ಗೇಟ್‌ ಮುರಿದು ಬ್ಯಾರಕ್‌ನಿಂದ ಹೊರಗೆ ಬರಲು  ಯತ್ನಿಸಿದ್ದರು. ಅದೇ ಸಮಯದಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕ ರಂಗನಾಥ್‌ ಅಲ್ಲಿಗೆ ಭೇಟಿ ನೀಡಿದ್ದರು. ಅವರು ಹಾಗೂ ಈ ಕಾರಾಗೃಹದ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಸದರಿ ಕೈದಿಗಳನ್ನು ತಡೆಯಲು ಪ್ರಯತ್ನಿಸಿದರು’ ಎಂದು ಮೂಲಗಳು ತಿಳಿಸಿವೆ. 

‘ಜಗಳ ಹತೋಟಿಗೆ ಬಾರದ ಕಾರಣ ಜೈಲಿನ ಸಿಬ್ಬಂದಿ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಅಪರಾಧ ವಿಭಾಗದ ಡಿಸಿಪಿ, ಎ.ಸಿ.ಪಿ, ಹಾಗೂ ಬರ್ಕೆ ಠಾಣೆಯ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಕಾರಾಗೃಹಕ್ಕೆ ಧಾವಿಸಿ, ಜಗಳವನ್ನು ಹತೋಟಿಗೆ ತಂದರು’ ಎಂದು ಜೈಲಿನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.  

ADVERTISEMENT

‘ಕಾರಾಗೃಹದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರಾಗೃಹದಲ್ಲೆ ಇದ್ದುಕೊಂಡು ಕೈದಿಗಳ ಮೇಲೆ ನಿಗಾವಹಿಸಿದ್ದಾರೆ. ಇಂತಹ ಘಟನೆ ಮರುಕಳಿಸುವುದನ್ನು ತಡೆಯಲು ಪೊಲಿಸರ ನೆರವನ್ನೂ ಪಡೆಯಲಾಗಿದೆ’ ಎಂದು ಕಾರಾಗೃಹದ ಅಧೀಕ್ಷಕ ಸುರೇಶ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸೋಮವಾರವಷ್ಟೇ ಎರಡು ಪ್ರತ್ಯೇಕ ಬ್ಯಾರಕ್‌ಗಳಲ್ಲಿದ್ದ ವಿಚಾರಣಾಧೀನ ಕೈದಿಗಳು ಪರಸ್ಪರ ಹೊಡೆದಾಡಿಕೊಂಡಿದ್ದರು. ಅದರ ಬೆನ್ನಲ್ಲೇ ಮತ್ತೆ ಹೊಡೆದಾಟ ಮರುಕಳಿಸಿರುವುದು ಕೈದಿಗಳು ಗುಂಪುಗೂಡಿ ಪರಸ್ಪರ ಹೊಡೆದಾಟ ಮಾಡುತ್ತಿರುವುದು  ಜೈಲಿನ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

‘ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆ ಆರೋಪದಲ್ಲಿ ಬಂಧಿತರಾಗಿರುವ ಪ್ರಮುಖ ಆರೋಪಿಗಳನ್ನು ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರಿಸಲಾಗಿದೆ. ಸೋಮವಾರದ ಹೊಡೆದಾಟದ ಸಂದರ್ಭದಲ್ಲಿ ಅವರು ಜೈಲಿನಲ್ಲಿ ಇರಲಿಲ್ಲ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.