ADVERTISEMENT

ಕಾಸರಗೋಡು: ಒಂದು ಪ್ರಕರಣ ದೃಢ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 15:10 IST
Last Updated 16 ಏಪ್ರಿಲ್ 2020, 15:10 IST

ಮಂಗಳೂರು: ಕೇರಳದಲ್ಲಿ ಗುರುವಾರ ಏಳು ಮಂದಿಯಲ್ಲಿ ಕೋವಿಡ್–19 ಸೋಂಕು ದೃಢಪಟ್ಟಿದ್ದು, ಈ ಪೈಕಿ ದುಬೈಯಿಂದ ಕಾಸರಗೋಡಿಗೆ ಬಂದಿದ್ದ ಚೆಮ್ನಾಡ್‌ನ 20 ವರ್ಷದ ಯುವಕ ಸೇರಿದ್ದಾನೆ.

ಮನೆಯಲ್ಲೇ ನಿಗಾದಲ್ಲಿದ್ದ ಈ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದು, ಈತನನ್ನು ಉಕ್ಕಿನಡ್ಕದಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಕಾಸರಗೋಡಿನಲ್ಲಿ 168 ಮಂದಿಗೆ ಕೋವಿಡ್‌–19 ಸೋಂಕು ತಗಲಿದ್ದು, 61 ಮಂದಿ ಮಾತ್ರ ಈಗ ಚಿಕಿತ್ಸೆ ಪಡೆಯುತ್ತಿದ್ದಾರೆ. 107 ಮಂದಿ ಗುಣಮುಖರಾಗಿದ್ದಾರೆ.

ಕಾಸರಗೋಡಿನಲ್ಲಿ ಸೋಂಕು ದೃಢಪಟ್ಟ 168 ಮಂದಿಯಲ್ಲಿ 103 ಮಂದಿ ವಿದೇಶದಿಂದ ಬಂದವರು. 65 ಮಂದಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗಲಿದೆ. ಐಸೋಲೇಷನ್ ವಾರ್ಡ್‌ನಲ್ಲಿ 114 ಮಂದಿ ನಿಗಾದಲ್ಲಿದ್ದಾರೆ.

ADVERTISEMENT

ಸೋಂಕು ಅತೀ ಹೆಚ್ಚು ಪತ್ತೆಯಾದ ಪ್ರದೇಶಗಳ 2,851 ಮನೆಗಳಿಗೆ ಆರೋಗ್ಯ ಕಾರ್ಯಕರ್ತರು ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಕಾಸರಗೋಡು ಜಿಲ್ಲೆಯನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ.

ಗಡಿ ದಾಟಲು ಯತ್ನ: ನಾಲ್ವರು ವಶಕ್ಕೆ

ಮಂಗಳೂರು: ಲಾಕ್‌ಡೌನ್ ನಿಬಂಧನೆ ಉಲ್ಲಂಘಿಸಿ ಕರ್ನಾಟಕದಿಂದ ತಲಪಾಡಿ ಮೂಲಕ ಕೇರಳಕ್ಕೆ ತೆರಳಲು ಯತ್ನಿಸಿದ ನಾಲ್ವರನ್ನು ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದು, ನಿಗಾ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಕಾಸರಗೋಡಿನಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚಾಗಿದ್ದರಿಂದ ಕರ್ನಾಟಕ-ಕೇರಳ ಗಡಿ ಭಾಗವನ್ನು ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಅಗತ್ಯ ವಸ್ತುಗಳು ಹಾಗೂ ತುರ್ತು ಆಂಬುಲೆನ್ಸ್‌ಗಳಿಗೆ ಸಂಚರಿಸಲು ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆದರೆ, ನಿಯಮ ಉಲ್ಲಂಘಿಸಿ ಹಲವರು ಸಂಚರಿಸಲು ಯತ್ನಿಸುತ್ತಿದ್ದಾರೆ ಎಂಬ ದೂರುಗಳು ವ್ಯಾಪಕವಾಗಿವೆ.

ದಾಟಿ ಬರುವವರನ್ನು ವಶಕ್ಕೆ ತೆಗೆದುಕೊಂಡು 14 ದಿನಗಳ ಕಾಲ ಸರ್ಕಾರದ ನಿಗಾ ಕೇಂದ್ರಕ್ಕೆ ಸೇರಿಸಲಾಗುವುದು ಎಂದು ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.