ಪುತ್ತೂರು: ಪ್ರಗತಿಪರ ಕೃಷಿಕ ನಾಗೇಶ್ ಪಟ್ಟೆಮಜಲು ಅವರ ಗದ್ದೆಯಲ್ಲಿ ತಳಿ ಅಭಿವೃದ್ಧಿ ಪಡಿಸಿದ ವಿಎನ್ಆರ್ ಸಂಸ್ಥೆಯ ಪ್ರತಿನಿಧಿಗಳಿಂದ ಭತ್ತದ ಕೃಷಿಕರಿಗೆ ಮಾಹಿತಿ ಕಾರ್ಯಕ್ರಮ ಮಂಗಳವಾರ ನಡೆಯಿತು.
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ‘ವಿಎನ್ಆರ್–2233’ ಎಂಬ ಸುಧಾರಿತ, ರೋಗ ನಿರೋಧಕ ಹಾಗೂ ಅಧಿಕ ಇಳುವರಿ ನೀಡುವ ಹೈಬ್ರೀಡ್ ಭತ್ತದ ತಳಿಯನ್ನು ಬೆಳೆದು ನಾಗೇಶ್ ಅಧಿಕ ಇಳುವರಿ ಪಡೆದಿದ್ದರು. ಇವರು ಸರ್ವೆ ಷಣ್ಮುಖ ಯುವಕ ಮಂಡಲದ ಖಜಾಂಚಯಾಗಿದ್ದಾರೆ. ಇದೇ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಿಸಲಾಯಿತು.
ಯುವಕ ಮಂಡಲದ ಅಧ್ಯಕ್ಷ ಕಮಲೇಶ್ ಸರ್ವೆದೋಳ ಗುತ್ತು ಮಾತನಾಡಿ, ‘ಭತ್ತ, ಅಡಿಕೆ, ತೆಂಗು, ತರಕಾರಿ, ಕಾಳು ಮೆಣಸು, ಗೇರು ಕೃಷಿಯ ಜೊತೆಗೆ ಹೈನುಗಾರಿಕೆ ಮತ್ತು ಕೋಳಿ ಸಾಕಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಾಗೇಶ್ ಅವರು ಮಾದರಿ ಹಾಗೂ ಪ್ರಗತಿಶೀಲ ಕೃಷಿಕರಾಗಿ ಗುರುತಿಸಿಕೊಂಡಿದ್ದಾರೆ’ ಎಂದರು.
ನಾಗೇಶ್ ಪಟ್ಟೆಮಜಲು ಅವರು ಮಾತನಾಡಿ, ‘ವಿಎನ್ಆರ್ 2233 ತಳಿಯ ಭತ್ತ ಬೆಳೆಯುವುದರಿಂದ ಉತ್ತಮ ಇಳುವರಿ ಪಡೆಯುವುದರ ಜೊತೆಗೆ ಹೈನುಗಾರಿಕೆಗೆ ಬೇಕಾದ ಉತ್ತಮ ಗುಣಮಟ್ಟದ ಬೈಹುಲ್ಲು ಅಧಿಕ ಪ್ರಮಾಣದಲ್ಲಿ ಲಭ್ಯವಾಗುತ್ತದೆ’ ಎಂದರು.
ವಿಎನ್ಆರ್ ಸಂಸ್ಥೆಯ ಪ್ರತಿನಿಧಿ ಶರತ್ ಅವರು ಕೃಷಿಕರಿಗೆ ಮಾಹಿತಿ ನೀಡಿದರು. ಹಲವು ರೈತರು ಈ ಸಂದರ್ಭ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.