ಉಜಿರೆ: ಆತ್ಮಹತ್ಯೆ ಮಾಡಿಕೊಳ್ಳಲುಕೊಡಗಿನಿಂದ ಧರ್ಮಸ್ಥಳಕ್ಕೆ ಬಂದಿದ್ದರು ಎನ್ನಲಾದ ತಾಯಿ ಮತ್ತು ಮಗುವನ್ನು ರಕ್ಷಿಸಿದ ಪೊಲೀಸರು ಸಾರ್ವಜನಿಕರ ಪ್ರಶಂಶೆಗೆ ಒಳಗಾಗಿದ್ದಾರೆ.
ಮಡಿಕೇರಿಯ ಶುಂಠಿಕೊಪ್ಪ ಗರಗಂದೂರು ಗ್ರಾಮದ ಮಲ್ಲಿಕಾರ್ಜುನ ಕಾಲೊನಿ ನಿವಾಸಿಯಾದ ಮಹಿಳೆಯು ಮಗುವಿನೊಂದಿಗೆ ಇದೇ 14ರಂದು ಆಸ್ಪತ್ರೆಗೆಂದು ಹೋದವರು ವಾಪಸಾಗಿರಲಿಲ್ಲ. ಈ ಸಂಬಂಧ ಮನೆಯವರು ಶುಂಠಿಕೊಪ್ಪ ಪೋಲೀಸರಿಗೆ ದೂರು ನೀಡಿದ್ದರು. ಧರ್ಮಸ್ಥಳಕ್ಕೆ ಹೋಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇಲ್ಲಿನ ಠಾಣೆಗೆ ಮಾಹಿತಿ ರವಾನೆಯಾಗಿತ್ತು. ಉಪನಿರೀಕ್ಷಕ ಕೃಷ್ಣಕಾಂತ್ ಪಾಟೀಲ ಮತ್ತು ಕಾನ್ಸ್ಟೆಬಲ್ ಶೇಷಣ್ಣ ಅವರ ತಂಡ ಮಡಿಕೇರಿಯಿಂದ ಧರ್ಮಸ್ಥಳಕ್ಕೆ ಬರುವ ಬಸ್ಗಳನ್ನು ಪರಿಶೀಲಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಮತ್ತು ಮಗು ಪತ್ತೆ ಆಗಿದ್ದಾರೆ.
ಅವರನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಅತ್ತೆಯ ಕಿರುಕುಳದಿಂದ ನೊಂದು ನೇತ್ರಾವತಿ ನದಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಬಂದಿರುವುದಾಗಿ ಮಹಿಳೆ ತಿಳಿಸಿದರು. ಮನೆಯವರನ್ನು ಠಾಣೆಗೆ ಕರೆಸಿ ಮಹಿಳೆ ಮತ್ತು ಮಗುವನ್ನು ಕಳುಹಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.