ಮಂಗಳೂರು: ವಿವಾಹವಾಗುವುದಾಗಿ ನಂಬಿಸಿ ಗರ್ಭಿಣಿಯಾಗಿಸಿ ವಂಚಿಸಿದ ಪ್ರಕರಣದ ಸಂತ್ರಸ್ತೆಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿ ಮಂಗಳೂರಿನ ಮಹಿಳಾ ಸಂಘಟನೆಗಳ ಪ್ರಮುಖರ ನಿಯೋಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ (ಎಸ್ಪಿ) ಮನವಿ ಸಲ್ಲಿಸಿತು.
‘ಮದುವೆಯ ಭರವಸೆ ನೀಡಿ, ಕೊನೆಗಳಿಗೆಯಲ್ಲಿ ವಂಚಿಸಿ ತಲೆ ಮರೆಸಿಕೊಳ್ಳಲು ಆರೋಪಿ ಕೃಷ್ಣ ಜೆ. ರಾವ್ಗೆ ಹಲವರು ಪ್ರಚೋದನೆ ನೀಡಿರುವ, ಬೆಂಬಲ ಒದಗಿಸಿರುವ, ಪರಿಹಾರ ಧನ ಪಡೆದು ಗರ್ಭಪಾತ ಮಾಡುವಂತೆ ಸಂತ್ರಸ್ತೆಯ ಕುಟುಂಬಕ್ಕೆ ಪ್ರಭಾವಿಗಳು ಒತ್ತಡ ಹೇರಿರುವ ಆರೋಪಗಳಿವೆ. ಇದಕ್ಕೆ ಸಂಬಂಧಿಸಿದವರನ್ನೂ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಜರುಗಿಸಬೇಕು’ ಎಂದು ಮುಖಂಡರು ಎಸ್ಪಿಯನ್ನು ಆಗ್ರಹಿಸಿದರು.
ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷೆ ಜಯಂತಿ ಬಿ. ಶೆಟ್ಟಿ, ಸಾಮರಸ್ಯ ಮಂಗಳೂರು ಅಧ್ಯಕ್ಷೆ ಮಂಜುಳಾ ನಾಯಕ್, ಜನವಾದಿ ಮಹಿಳಾ ಸಂಘಟನೆಯ ನಗರ ಘಟಕದ ಅಧ್ಯಕ್ಷೆ ಅಸುಂತಾ ಡಿಸೋಜ, ಕಾರ್ಯದರ್ಶಿ ಮಾಧುರಿ ಬೋಳಾರ, ದಲಿತ ಹಕ್ಕುಗಳ ಸಮಿತಿಯ ಈಶ್ವರಿ ಪದ್ಮುಂಜ, ಬೀಡಿ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷೆ ವಸಂತಿ ಕುಪ್ಪೆಪದವು, ಪ್ರಮುಖರಾದ ಭಾರತಿ ಬೋಳಾರ, ಪ್ರಮೀಳಾ ದೇವಾಡಿಗ, ರಮಣಿ ಮೂಡುಬಿದಿರೆ, ಲೀಡಿಯಾ, ಜೆಸಿಂತಾ, ಅರ್ಚನಾ ಆಚಾರ್ಯ, ಮೀನಾ ಟೆಲ್ಲಿಸ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.