ADVERTISEMENT

ಪೊಲೀಸ್–ಚಾಲಕನ ನಡುವೆ ಮಾತಿನ ಚಕಮಕಿ

ತಲಪಾಡಿ– ಮಂಗಳೂರು ಖಾಸಗಿ ನಗರ ಸಾರಿಗೆ ಸಂಚಾರ ಸ್ಥಗಿತ: ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2022, 16:05 IST
Last Updated 13 ಆಗಸ್ಟ್ 2022, 16:05 IST
ಪ್ರತಿಭಟನಾ ನಿರತ ತಲಪಾಡಿ ಸಿಟಿ ಬಸ್ ಸಿಬ್ಬಂದಿ
ಪ್ರತಿಭಟನಾ ನಿರತ ತಲಪಾಡಿ ಸಿಟಿ ಬಸ್ ಸಿಬ್ಬಂದಿ   

ಉಳ್ಳಾಲ: ಅತಿವೇಗದ ಚಾಲನೆಯ ವಿಚಾರವಾಗಿ ಪೊಲೀಸ್ ಮತ್ತು ಚಾಲಕನ ಮಧ್ಯೆ ಶನಿವಾರತಲಪಾಡಿಯಲ್ಲಿ ಮಾತಿನ ಚಕಮಕಿ ನಡೆದಿದ್ದು, ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು. ಇದನ್ನು ಖಂಡಿಸಿ ಖಾಸಗಿ ಬಸ್‌ ನೌಕರರು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಿದ ಬಳಿಕ, ಪ್ರಕರಣವು ರಾಜಿಯಲ್ಲಿ ಇತ್ಯರ್ಥಗೊಂಡಿತು.

ತಲಪಾಡಿ ತಪಾಸಣಾ ಕೇಂದ್ರದ ಬಳಿ ಲಾರಿಯೊಂದನ್ನು ಓವರ್ ಟೇಕ್ ಮಾಡಿಕೊಂಡು ಬಂದ ಬಸ್‌ನ ಫೋಟೊವನ್ನು ಸಂಚಾರ ಪೊಲೀಸ್ ಠಾಣೆಯ ಎಎಸ್‍ಐ ಆಲ್ಬರ್ಟ್‌ ಲಸ್ರಾದೋ ಕ್ಲಿಕ್ಕಿಸಿದರು. ಆಗ ಚಾಲಕ ಅಭಿಲಾಷ್ ರಾಜ್ ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆದಿದೆ. ಚಾಲಕನನ್ನು ಉಳ್ಳಾಲ ಪೊಲೀಸರು ವಶಕ್ಕೆ ಪಡೆದುಕೊಂಡರು.

ಇದನ್ನು ಖಂಡಿಸಿ ತಲಪಾಡಿ- ಮಂಗಳೂರು ನಡುವೆ ಸಂಚರಿಸುವ ಖಾಸಗಿ ಬಸ್‍ ಸಂಚಾರ ಸ್ಥಗಿತಗೊಳಿಸಿ, ನೌಕರರು ಪ್ರತಿಭಟನೆ ನಡೆಸಿದರು. ಪ್ರಯಾಣಿಕರು ಸರ್ಕಾರಿ ಬಸ್ ಮೊರೆ ಹೋಗಬೇಕಾಯಿತು.

ADVERTISEMENT

ಅನಂತರ ಪೊಲೀಸ್ ಠಾಣೆಯಲ್ಲಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ನೇತೃತ್ವದಲ್ಲಿ ಸಭೆ ನಡೆಸಿ, ರಾಜಿಯಲ್ಲಿ ಚಾಲಕನನ್ನು ಬಿಡುಗಡೆ ಮಾಡಲಾಯಿತು. ಬಳಿಕ ಸಂಚಾರ ಆರಂಭವಾಯಿತು.

‘ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥ ಮಾಡಿದ್ದು, ಚಾಲಕನಿಗೆ ದಂಡ ವಿಧಿಸಿಲ್ಲ’ ಎಂದು ಸಂಚಾರ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.