ADVERTISEMENT

ಶಿಸ್ತು ಉಲ್ಲಂಘಿಸಿದರೆ ಸಮಸ್ಯೆ ಹೆಚ್ಚು: ಎಚ್.ಕೆ. ಕೃಷ್ಣಮೂರ್ತಿ

ಗೂಡ್ಸ್ ವಾಹನ ‘ತಂಗುದಾಣ’ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 1 ಸೆಪ್ಟೆಂಬರ್ 2018, 12:14 IST
Last Updated 1 ಸೆಪ್ಟೆಂಬರ್ 2018, 12:14 IST
ಪುತ್ತೂರು ನಗರದ ದರ್ಬೆ ಪ್ರವಾಸಿ ಮಂದಿರದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಗೂಡ್ಸ್ ಪಾರ್ಕಿಂಗ್ ತಂಗುದಾಣವನ್ನು ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.
ಪುತ್ತೂರು ನಗರದ ದರ್ಬೆ ಪ್ರವಾಸಿ ಮಂದಿರದ ಮುಂಭಾಗದಲ್ಲಿ ನೂತನವಾಗಿ ನಿರ್ಮಾಣ ಮಾಡಲಾದ ಗೂಡ್ಸ್ ಪಾರ್ಕಿಂಗ್ ತಂಗುದಾಣವನ್ನು ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ.ಕೃಷ್ಣಮೂರ್ತಿ ಅವರು ಶನಿವಾರ ಲೋಕಾರ್ಪಣೆಗೊಳಿಸಿದರು.   

ಪುತ್ತೂರು: ‘ವಾಹನ ಚಾಲನೆ ಮಾಡುವಾಗ ಚಾಲಕರು, ಸವಾರರು ಶಿಸ್ತಿನಿಂದ ವರ್ತಿಸಬೇಕು. ಶಿಸ್ತು ಉಲ್ಲಂಘನೆ ಮಾಡಿದರೆ ಸಮಸ್ಯೆ ಹೆಚ್ಚಾಗುತ್ತದೆ ’ಎಂದು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ ಹೇಳಿದರು.

ದರ್ಬೆ ಪ್ರವಾಸಿ ಮಂದಿರದ ಮುಂಭಾಗದಲ್ಲಿ ನಿರ್ಮಾಣ ಮಾಡಲಾದ ಗೂಡ್ಸ್ ವಾಹನ ನಿಲ್ದಾಣವನ್ನು ಶನಿವಾರ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಾಹನ ಪಾರ್ಕಿಂಗ್, ವಾಹನ ನಿರ್ವಹಣೆ ಮತ್ತು ತ್ಯಾಜ್ಯ ವಿಲೇವಾರಿ ಈ ಮೂರು ಪುತ್ತೂರು ನಗರದ ಬಹುದೊಡ್ಡ ಸಮಸ್ಯೆಯಾಗಿದ್ದು, ಇವುಗಳ ಪೈಕಿ ವಾಹನ ನಿಲುಗಡೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ನಗರಸಭೆ ಮತ್ತು ಪೊಲೀಸ್ ಇಲಾಖೆಯಿಂದ ಹೊಸ ಪ್ರಯೋಗ ಮಾಡಲಾಗುತ್ತಿದ್ದು, ಇದರ ಭಾಗವಾಗಿ ಇಂದು ಗೂಡ್ಸ್ ವಾಹನಗಳ ತಂಗುದಾಣ ಮಾಡಲಾಗಿದೆ

ADVERTISEMENT

ಸುಂದರ ಪುತ್ತೂರು ನಿರ್ಮಾಣ ಮಾಡಬೇಕೆಂದು ಕೇವಲ ಬಾಯಿ ಮಾತಿನಲ್ಲಿ ಹೇಳುವುದಲ್ಲ. ಅದನ್ನು ಕಾರ್ಯರೂಪಕ್ಕೆ ತರುವುದು ಮುಖ್ಯ. ಸ್ವಚ್ಛತೆ ಕುರಿತು ಆಡಳಿತ ವರ್ಗ ಕಾರ್ಯಕ್ರಮ ಕೈಗೊಳ್ಳುತ್ತಿದ್ದು, ಅದಕ್ಕೆ ಸಾರ್ವಜನಿಕರ ಸಹಕಾರ ಬಹಳ ಮುಖ್ಯ ಎಂದರು.

ದೀಪ ಪ್ರಜ್ವಲಿಸಿ ಮಾತನಾಡಿದ ಪುತ್ತೂರು ನಗರಸಭಾ ಪೌರಾಯುಕ್ತೆ ರೂಪಾ ಶೆಟ್ಟಿ ಅವರು ದರ್ಬೆಯ ಪರಿಸರದಲ್ಲಿ ನಿರ್ಮಾಣಗೊಂಡಿರುವ ಗೂಡ್ಸ್ ತಂಗುದಾಣದ ಹಿಂದೆ ಎಲ್ಲರ ಪರಿಶ್ರಮವಿದೆ. ಇದೊಂದು ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಪಾರ್ಕಿಂಗ್ ಸಮಸ್ಯೆಯ ಕುರಿತು ಮುಂದಿನ ದಿನಗಳಲ್ಲಿ ಹೊಸ ಯೋಜನೆಗಳನ್ನು ಜಾರಿಸಲಾಗುವುದು ಎಂದರು.

ಪುತ್ತೂರು ನಗರಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್ ಅವರು ಮಾತನಾಡಿ, ಪಾರ್ಕಿಂಗ್ ಇಲ್ಲಿನ ಪ್ರಮುಖ ಸಮಸ್ಯೆಯಾಗಿದ್ದು, ಪರಿಹಾರದ ದೃಷ್ಟಿಯಿಂದ ಸರ್ಕಾರದ ಸೂಚನೆಯಂತೆ ನಾವು ವಾಹನ ಸಂಚಾರ ದಟ್ಟಣೆಯ ಕುರಿತು ಸಪ್ತಾಹ ನಡೆಸಿದ್ದೆವು. ಸಾರ್ವಜನಿಕರಿಂದ ಸಹಕಾರ ದೊರೆತ ಕಾರಣ ಯಶಸ್ವಿಯಾಗಿದೆ. ಇದೀಗ ಜನರೇ ಸ್ವಯಂಪ್ರೇರಿತರಾಗಿ ಸಮಸ್ಯೆ ಪರಿಹಾರಕ್ಕೆ ಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.

ಗೌರವಾರ್ಪಣೆ: ಪುತ್ತೂರು ಉಪವಿಭಾಗಾಧಿಕಾರಿ ಎಚ್.ಕೆ. ಕೃಷ್ಣಮೂರ್ತಿ, ನಗರಠಾಣೆಯ ಇನ್‌ಸ್ಪೆಕ್ಟರ್ ಮಹೇಶ್ ಪ್ರಸಾದ್, ಪೌರಾಯುಕ್ತೆ ರೂಪಾ ಶೆಟ್ಟಿ, ಪುತ್ತೂರು ಸಂಚಾರ ಠಾಣೆಯ ಎಸ್ಐ ನಾರಾಯಣ ರೈ ಅವರನ್ನು ಗೂಡ್ಸ್ ವಾಹನ ಚಾಲಕ ಮಾಲೀಕರ ಸಂಘದವರು ಸನ್ಮಾನಿಸಿದರು.

ಪುತ್ತೂರು ಗೂಡ್ಸ್ ವಾಹನ ಚಾಲಕ ಮಾಲೀಕರ ಸಂಘದ ಗೌರವ ಸಲಹೆಗಾರರಾದ ವಕೀಲೆ ಶೈಲಜಾ ಅಮರನಾಥ್ ಇದ್ದರು. ಸಂಘದ ಅಧ್ಯಕ್ಷ ಸುರೇಂದ್ರ ಕಿಣಿ ಪ್ರಸ್ತಾವಿಕ ಮಾತನಾಡಿದರು. ರೋಟರಿ ಸಿಟಿ ಅಧ್ಯಕ್ಷ ಉಮೇಶ್ ನಾಯಕ್ ಸ್ವಾಗತಿಸಿದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.