ADVERTISEMENT

ಜನಪ್ರತಿನಿಧಿಗಳ ನಡೆಗೆ ಪ್ರೊ.ಬಿ.ಎ.ವಿವೇಕ ರೈ ಖಂಡನೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 17:02 IST
Last Updated 1 ಏಪ್ರಿಲ್ 2020, 17:02 IST
ವಿವೇಕ ರೈ
ವಿವೇಕ ರೈ   

ಮಂಗಳೂರು: ‘ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಲಾಕ್‌ಡೌನ್ ಬಳಿಕ ಜನಜೀವನದ ವಿಚಾರದಲ್ಲಿ ಎಲ್ಲ ಅರ್ಥಗಳಲ್ಲೂ ‘ಸಾಮಾಜಿಕ ಅಂತರ’ ಕಾಯ್ದುಕೊಂಡು ಬರುತ್ತಿದ್ದಾರೆ’ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಖಂಡಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ 3 ರವರೆಗೆ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದಾಗ ಜನರು ‘ಸಾಮಾಜಿಕ ಅಂತರ’ ತತ್ವವನ್ನು ಉಲ್ಲಂಘನೆ ಮಾಡಿದ್ದಾರೆ’ ಎಂದು ಜನಪ್ರತಿನಿಧಿಗಳು ಆಕ್ಷೇಪಿಸಿದ್ದರು. ಆದರೆ, ಅದರ ಹಿಂದಿನ‌ ಮೂರು ದಿನಗಳ ಕಾಲ ಹೇರಿದ ನಿರ್ಬಂಧಗಳಿಂದಾಗಿ ಹಸಿದ ಮತ್ತು ಮುಂದಿನ ದಿನಗಳ ಅನಿಶ್ಚಿತತೆಯ ಆತಂಕದಿಂದ ಜನರು ಭೌತಿಕ ಅಂತರದ ಲಕ್ಷ್ಮಣರೇಖೆಯನ್ನು‌ ಮೀರಿರಬಹುದು. ಆದರೆ, ತಮ್ಮ ಜೊತೆಗೆ ಸರದಿಯಲ್ಲಿ ಇದ್ದ ಅಪರಿಚಿತರ ಬಗ್ಗೆ ಯಾವುದೇ ಬಗೆಯ ಅಂತರವನ್ನು ಇಟ್ಟುಕೊಳ್ಳದೇ ಮಾನವೀಯವಾಗಿ ಸಹಾಯ ಮಾಡಿದ್ದನ್ನು ನಾನು ಮಂಗಳೂರಿನಲ್ಲಿ ‌ಕಣ್ಣಾರೆ ಕಂಡಿದ್ದೇನೆ. ಆದರೆ, ಜನಪ್ರತಿನಿಧಿಗಳು ಮಾತ್ರ ಸಾಮಾನ್ಯ ಜನರ ದೈನಂದಿನ ಜೀವನದ ವಿಚಾರದಲ್ಲಿ ‘ಸಾಮಾಜಿಕ ಅಂತರ’ವನ್ನು ಪಾಲಿಸಿಕೊಂಡು ಬರುತ್ತಿದ್ದಾರೆ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT