ADVERTISEMENT

ರಂಗಮಂದಿರದಲ್ಲಿ ಕಲಾ ಚಟುವಟಿಕೆಗೆ ಆದ್ಯತೆ

₹ 12 ಕೋಟಿ ಹಣ ಮಂಜೂರು: ಶಾಸಕ ಡಾ. ಭರತ್ ಶೆಟ್ಟಿ

​ಪ್ರಜಾವಾಣಿ ವಾರ್ತೆ
Published 16 ಮೇ 2022, 15:34 IST
Last Updated 16 ಮೇ 2022, 15:34 IST
ಮಂಗಳೂರಿನಲ್ಲಿ ಸೋಮವಾರ ನಡೆದ ಜಿಲ್ಲಾ ರಂಗಮಂದಿರ ನಿರ್ಮಾಣ ಕುರಿತ ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಇದ್ದರು.
ಮಂಗಳೂರಿನಲ್ಲಿ ಸೋಮವಾರ ನಡೆದ ಜಿಲ್ಲಾ ರಂಗಮಂದಿರ ನಿರ್ಮಾಣ ಕುರಿತ ಸಭೆಯಲ್ಲಿ ಶಾಸಕ ಡಾ. ಭರತ್ ಶೆಟ್ಟಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಇದ್ದರು.   

ಮಂಗಳೂರು: ‘ನಗರದ ಬೋಂದೆಲ್‌ನಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಜಿಲ್ಲಾ ರಂಗಮಂದಿರದಲ್ಲಿ ಕಲಾ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುವುದು’ ಎಂದು ಶಾಸಕ ಡಾ. ಭರತ್ ಶೆಟ್ಟಿ ತಿಳಿಸಿದರು.

ಜಿಲ್ಲಾ ರಂಗಮಂದಿರದ ನಿರ್ಮಾಣ ಕುರಿತಂತೆ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು. ‘ರಂಗ ಮಂದಿರ ನಿಮಾಣಕ್ಕೆ ಸರ್ಕಾರದಿಂದ ಒಟ್ಟು ₹12 ಕೋಟಿ ಹಣ ಮಂಜೂರಾಗಿದೆ. ಅದರಲ್ಲಿ ಸುಸಜ್ಜಿತ ರಂಗಮಂದಿರದ ನಿರ್ಮಾಣ, ಕಲಾ ಚಟುವಟಿಕೆಗಳಿಗೆ ಅಗತ್ಯವಿರುವ ವೇದಿಕೆ, ಗ್ರೀನ್ ರೂಮ್ ಒಳಗೊಂಡ ವಿನ್ಯಾಸದ ಯೋಜನೆಯನ್ನು ಸಿದ್ಧಪಡಿಸಲಾಗುವುದು’ ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮಾತನಾಡಿ, ‘ನಿರ್ಮಾಣವಾಗಲಿರುವ ರಂಗ ಮಂದಿರವು 750 ಆಸನ ಸಾಮರ್ಥ್ಯವನ್ನು ಒಳಗೊಂಡಿರಲಿದೆ. ಉತ್ತಮ ಧ್ವನಿ– ಬೆಳಕಿನ ವ್ಯವಸ್ಥೆ, ಎ.ಸಿ., ಫ್ಯಾನ್, ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಒದಗಿಸಲಾಗುವುದು. ಅನುದಾನ ಬಿಡುಗಡೆ ಆಧರಿಸಿ, ಮುಂದೆ ಹಂತ ಹಂತವಾಗಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು’ ಎಂದರು.

ADVERTISEMENT

ಸ್ಮಾರ್ಟ್‌ ಸಿಟಿ ವಾಸ್ತುಶಿಲ್ಪಿ ಧರ್ಮರಾಜ್ ಅವರು ಉದ್ದೇಶಿತ ರಂಗಮಂದಿರ ನಿರ್ಮಾಣದ ವಿನ್ಯಾಸವನ್ನು ತಿಳಿಸಿದರು. ಈ ಕುರಿತು ಸಭೆಯಲ್ಲಿ ವಿವರ ಚರ್ಚೆ ನಡೆದು, ವಿನ್ಯಾಸದಲ್ಲಿ ಬದಲಾವಣೆಗಳಿದ್ದಲ್ಲಿ ತಿಳಿಸುವಂತೆ ಜಿಲ್ಲಾಧಿಕಾರಿ, ಜಿಲ್ಲೆಯ ಕಲಾವಿದರು, ಮುಖಂಡರಿಗೆ ತಿಳಿಸಿದರು.

ಕಲಾವಿದರಾದ ಯತೀಶ್ ಬೈಕಂಪಾಡಿ, ಯಕ್ಷಗಾನ ಕಲಾವಿದ ಅಶೋಕ್ ಸರಪಾಡಿ, ನಾಟಕಕಾರ ಜಗನ್ ಪವಾರ್, ಮೋಹನ್ ಕುಂಪಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.