ಉಪ್ಪಿನಂಗಡಿ: ‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಮಂಡಿಸುವ ಮೂಲಕ ಲೂಟಿಕೋರರಿಗೆ ಸಹಾಯ ಮಾಡಲು ಹೊರಟಿದೆ. ಈ ಕಾಯ್ದೆಯಿಂದ ಬೇರೆ ಯಾರಿಗೂ ಲಾಭವಿಲ್ಲ. ವಕ್ಫ್ ಆಸ್ತಿಯ ವಿಚಾರ ಮುಂದಿಟ್ಟುಕೊಂಡು ದೇಶವನ್ನು ಒಡೆದು ಆಳುವ ಕೆಲಸಕ್ಕೆ ಹೊರಟಿದೆ’ ಎಂದು ವಕೀಲ ಸುಧೀರ್ ಕುಮಾರ್ ಮುರೊಳ್ಳಿ ಹೇಳಿದರು.
ನಾಗರಿಕ ಹಿತರಕ್ಷಣಾ ವೇದಿಕೆ ವತಿಯಿಂದ ಮಂಗಳವಾರ ಉಪ್ಪಿನಂಗಡಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿ, ‘ವಕ್ಫ್ ಆಸ್ತಿ ಎನ್ನುವುದು ಮುಸ್ಲಿಂ ಧರ್ಮದ ನಂಬಿಕೆಯ ಭಾಗವಾಗಿದೆ. ಆದರೆ, ಈ ಸಮಿತಿಯಲ್ಲಿ ಈಗ ಮುಸ್ಲಿಮೇತರರಿಗೂ ಅವಕಾಶ ಮಾಡಿಕೊಟ್ಟಿರುವುದು ಸಂವಿಧಾನ ವಿರೋಧಿಯಾಗಿದೆ. ಕೇಂದ್ರ ಸರ್ಕಾರದ ಮರ್ಮವನ್ನು ಅರ್ಥ ಮಾಡಿಕೊಂಡು ಧರ್ಮ ಭೇದ ಬಿಟ್ಟು ನಾವೆಲ್ಲ ಒಂದಾಗಿ ಈ ತಿದ್ದುಪಡಿ ಕಾಯ್ದೆಯನ್ನು ನ್ಯಾಯಯುತ ಹೋರಾಟದ ಮೂಲಕ ವಿರೋಧಿಸಬೇಕಿದೆ’ ಎಂದರು.
ಸಿಪಿಎಂ ದ.ಕ. ಜಿಲ್ಲಾ ಘಟಕದ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಮಾತನಾಡಿ, ‘ಇಂದು ಕೋಮುವಾದಿ ಹಿಂದುತ್ವವಾದಿ ಶಕ್ತಿಗಳ ಜೊತೆಗೆ ಕೈಜೋಡಿಸಿಕೊಂಡು ಅದಾನಿ, ಅಂಬಾನಿಗಳಂಥ ಕಾರ್ಪೊರೇಟ್ ಸಂಸ್ಥೆಗಳು ನಮ್ಮ ದೇಶ ಆಳುತ್ತಿವೆ. ಅವರ ಈ ಕೋಟೆಯನ್ನು ಉಳಿಸಲು ಮತ್ತು ದೇಶವನ್ನು ನುಂಗುವ ಕುತಂತ್ರಕ್ಕಾಗಿ ವಕ್ಫ್ ಮಸೂದೆ ತಿದ್ದುಪಡಿ ಕಾಯ್ದೆ ಮಂಡನೆ ಮಾಡಿದ್ದಾರೆ. ಕೇಂದ್ರ ಸರ್ಕಾರದ ಈ ನಿಲುವಿನ ವಿರುದ್ಧ ಒಗ್ಗಟ್ಟಾಗಿ ಹೋರಾಡಬೇಕು’ ಎಂದರು.
ಜಮಾಅತೆ ಹಿಂದ್ನ ಇಸಾಕ್ ಪುತ್ತೂರು, ಎಸ್ಎಸ್ಎಫ್ ಮುಖಂಡ ಅಬ್ದುಲ್ ರಶೀದ್ ಝೈನಿ, ಎಸ್ಡಿಪಿಐನ ಅನ್ವರ್ ಸಾದಾತ್ ಬಜತ್ತೂರು, ಇಕ್ಬಾಲ್ ಬಾಳಿಲ ಮಾತನಾಡಿದರು.
ಕರ್ವೇಳ್ ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್, ಪ್ರಮುಖರಾದ ಸೋಮನಾಥ, ಎಂ.ಎಸ್.ಮಹಮ್ಮದ್, ಶಾಹುಲ್ ಹಮೀದ್, ಡಾ.ರಾಜಾರಾಮ್, ಮುರಳೀಧರ್ ರೈ ಮಠಂತಬೆಟ್ಟು, ಎಚ್.ಯೂಸುಫ್, ಯು.ಟಿ.ತೌಸೀಫ್, ಅಬ್ದುಲ್ ರಶೀದ್ ಮಠ, ಅಜೀಜ್ ಬಸ್ತಿಕಾರ್, ಅಮೀನ್ ಅಹ್ಸನ್, ಯೂಸುಫ್ ಪೆದಮಲೆ, ಇಸ್ಮಾಯಿಲ್ ತಂಙಳ್, ಯುನಿಕ್ ಅಬ್ದುಲ್ ರಹಿಮಾನ್, ಹಾರೂನ್ ರಶೀದ್ ಅಗ್ನಾಡಿ, ಇಬ್ರಾಹಿಂ ಆಚಿ, ಇಸ್ಮಾಯಿಲ್ ಇಕ್ಬಾಲ್, ಅಬ್ದುಲ್ ಹಮೀದ್ ಕರಾವಳಿ, ಇಸಾಕ್ ಮೇದರಬೆಟ್ಟು, ಮಹಮ್ಮರ್ ಮುಸ್ತಾಫ, ನಝೀರ್ ಮಠ ಭಾಗವಹಿಸಿದ್ದರು.
ನಾಗರಿಕ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಮಹಮ್ಮದ್ ನೆಕ್ಕಿಲಾಡಿ ಸ್ವಾಗತಿಸಿ, ಶಬೀರ್ ಕೆಂಪಿ ವಂದಿಸಿದರು. ಯು.ಟಿ. ಇರ್ಷಾದ್ ನಿರೂಪಿಸಿದರು.
8 ನಿರ್ಣಯಗಳನ್ನು ಅಂಗೀಕರಿಸಲಾಯಿತು. ಮನವಿ ಪತ್ರವನ್ನು ಉಪ್ಪಿನಂಗಡಿ ನಾಡ ಕಚೇರಿಯ ಉಪ ತಹಶೀಲ್ದಾರ್ ಚೆನ್ನಪ್ಪ ಗೌಡ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.