ಮಂಗಳೂರು: ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಲಾಕ್ಡೌನ್ ಪರಿಹಾರ ₹ 5 ಸಾವಿರಕ್ಕೆ ಸೇರಿಸಿ ಪ್ರತಿ ತಿಂಗಳಿಗೆ ₹ 2 ಸಾವಿರದಂತೆ ಮುಂದಿನ ಮೂರು ತಿಂಗಳ ತನಕ ಪರಿಹಾರ ನೀಡಲು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೇ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು) ಒತ್ತಾಯಿಸಿದೆ.
ಇಲ್ಲಿನ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿ ಎದುರು ಗುರುವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮುಖಂಡರು, ₹5 ಸಾವಿರ ಪರಿಹಾರವನ್ನು ಇನ್ನೂ ಪಡೆದಿರದ ಕಾರ್ಮಿಕರಿಗೆ ಕೂಡಲೇ ನೀಡಬೇಕು. ಈ ಯೋಜನೆಯ ಅವಧಿಯನ್ನು ವಿಸ್ತರಿಸಬೇಕು. ಸೇವಾಸಿಂಧುವಿನಲ್ಲಿ ನಡೆಯುವಂತಹ ಭ್ರಷ್ಟಾಚಾರವನ್ನು ತಡೆಗಟ್ಟಬೇಕು. ಕಾರ್ಮಿಕ ಇಲಾಖೆಯಲ್ಲಿ ಕೊರತೆ ಇರುವ ಸಿಬ್ಬಂದಿ ನೇಮಕಾತಿ ಆಗಬೇಕು ಎಂಬ ಆಗ್ರಹಿಸಿದರು.
ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಸಂತ ಆಚಾರಿ, ಪ್ರಧಾನ ಕಾರ್ಯದರ್ಶಿ ಯು.ಜಯಂತ ನಾಯ್ಕ್ ಮಾತನಾಡಿದರು. ನಗರದ ಸಹಾಯಕ ಕಾರ್ಮಿಕ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಸಂಘದ ಮುಂದಾಳುಗಳಾದ ರವಿಚಂದ್ರ ಕೊಂಚಾಡಿ, ಕೆ.ಪಿ. ಜೋನಿ, ಜನಾರ್ದನ ಕುತ್ತಾರ್, ಸದಾಶಿವ ದಾಸ್, ಅಶೋಕ್ ಶ್ರೀಯಾನ್, ಪಾಂಡುರಂಗ, ದಯಾನಂದ ಶೆಟ್ಟಿ, ಕೃಷ್ಣಪ್ಪ ಮೂಡುಬಿದಿರೆ, ದಿನೇಶ್ ಶೆಟ್ಟಿ, ವಸಂತಿ, ಯಶೋದಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.