
ಮಂಗಳೂರು: 'ಪುರಾಣವನ್ನು ತಿಳಿದು ಕೊಳ್ಳುವುದರಿಂದ ಜೀವನ ಶೈಲಿ ಬದಲಾಗುತ್ತದೆ, ಜೀವನಕ್ಕೊಂದು ಶಿಸ್ತು ಬರುತ್ತದೆ, ಜ್ಞಾನದ ಹರವು ಹೆಚ್ಚುತ್ತದೆ' ಎಂದು ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಹೇಳಿದರು.
ಮಂಗಳೂರಿನ ಹರಿಕಥಾ ಪರಿಷತ್, ರಾಮಕೃಷ್ಣ ಮಿಷನ್ ಸಹ ಯೋಗದಲ್ಲಿ ಕರ್ನಾಟಕ ರಾಜ್ಯ ಮತ್ತು ಕಾಸರಗೋಡು ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಶನಿವಾರ ಇಲ್ಲಿ ಏರ್ಪಡಿಸಿದ್ದ ಹರಿಕಥಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಹರಿಕಥೆಗಳು ಆದರ್ಶ, ಅಧ್ಯಾತ್ಮ, ನೈತಿಕತೆಯ ಸಮ್ಮಿಳಿತ. ಮಕ್ಕಳು ಹರಿಕಥೆ ಕೇಳುವ ಹವ್ಯಾಸ ರೂಢಿಸಿಕೊಂಡರೆ, ನೈತಿಕ ಶಿಕ್ಷಣ ತನ್ನಿಂದ ತಾನಾಗಿ ಸಿಗುತ್ತದೆ ಎಂದರು.
ಲೆಕ್ಕಪರಿಶೋಧಕ ಎಸ್.ಎಸ್. ನಾಯಕ್, 'ಇತ್ತೀಚಿನ ವರ್ಷಗಳಲ್ಲಿ ಹರಿಕಥೆಗೆ ಹೆಚ್ಚು ಪ್ರಾಶಸ್ತ್ಯ ದೊರೆಯು ತ್ತಿದೆ. ಅಲ್ಲಲ್ಲಿ ಹರಿಕಥಾ ಸ್ಪರ್ಧೆ ನಡೆ ಯುವುದು ಸಂತಸದ ವಿಚಾರ' ಎಂದರು.
ಹರಿಕಥಾ ಪರಿಷತ್ತಿನ ಅಧ್ಯಕ್ಷ ಕೆ. ಮಹಾಬಲಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಬ್ಯಾಂಕ್ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಉದ್ಯಮಿ ಎಂ. ರವೀಂದ್ರ ಶೇಟ್ ಭಾಗವಹಿಸಿದ್ದರು.
ಹರಿಕಥಾ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಸುಧಾಕರ ರಾವ್ ಪೇಜಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಹರಿದಾಸ ಎಸ್.ಪಿ. ಗುರುದಾಸ್ ನಿರೂಪಿಸಿದರು.
ಎರಡು ವಿಭಾಗಗಳಲ್ಲಿ ನಡೆದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಕಾಸರಗೋಡು, ಉತ್ತರ ಕನ್ನಡ, ಶಿವಮೊಗ್ಗ, ಬಾಗಲಕೋಟೆ, ಬೆಂಗಳೂರು ಜಿಲ್ಲೆಗಳ 22 ಯುವ ಪ್ರತಿಭೆಗಳು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.