ADVERTISEMENT

ಕರ್ಣಾಟಕ ಬ್ಯಾಂಕ್‌ ಸಿಇಒ ಮಹಾಬಲೇಶ್ವರಗೆ ‘ಪುರುಷೋತ್ತಮ’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 7 ಮೇ 2022, 16:13 IST
Last Updated 7 ಮೇ 2022, 16:13 IST
ರಾಮಚಂದ್ರಾಪುರ ಮಠದಿಂದ ನೀಡಲಾದ ‘ಪುರುಷೋತ್ತಮ’ ಪ್ರಶಸ್ತಿಯನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಅವರಿಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರದಾನ ಮಾಡಿದರು.
ರಾಮಚಂದ್ರಾಪುರ ಮಠದಿಂದ ನೀಡಲಾದ ‘ಪುರುಷೋತ್ತಮ’ ಪ್ರಶಸ್ತಿಯನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಅವರಿಗೆ ರಾಘವೇಶ್ವರ ಭಾರತೀ ಸ್ವಾಮೀಜಿ ಪ್ರದಾನ ಮಾಡಿದರು.   

ಮಂಗಳೂರು: ಹೊಸನಗರದ ರಾಮಚಂದ್ರಾಪುರ ಮಠದ ವತಿಯಿಂದ ಶ್ರೀರಾಮನವಮಿಯ ಸಂದರ್ಭದಲ್ಲಿ ಘೋಷಿಸಿದ್ದ ಪ್ರಸಕ್ತ ವರ್ಷದ ‘ಪುರುಷೋತ್ತಮ’ ಪ್ರಶಸ್ತಿಯನ್ನು ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮಹಾಬಲೇಶ್ವರ ಎಂ.ಎಸ್. ಅವರಿಗೆ ಪ್ರದಾನ ಮಾಡಲಾಯಿತು.

ಸಿದ್ದಾಪುರ ತಾಲೂಕಿನ ಭಾನ್ಕುಳಿ ರಾಮದೇವಮಠ ಗೋಸ್ವರ್ಗದಲ್ಲಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಈ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಮಹಾಬಲೇಶ್ವರ ಅವರು ಬ್ಯಾಂಕಿಂಗ್ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಾಬಲೇಶ್ವರ ಎಂ.ಎಸ್., ‘ಮರ್ಯಾದಾ ಪುರುಷೋತ್ತಮ ರಾಮಚಂದ್ರನನ್ನು ನೆನೆಯುತ್ತಾ ‘ಪುರುಷೋತ್ತಮ’ ಪ್ರಶಸ್ತಿಯನ್ನು ಸ್ವೀಕರಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಕಿರುವಯಸ್ಸಿನಲ್ಲಿಯೇ ದೇಶದಾದ್ಯಂತ ಅದ್ವೈತ ಸಿದ್ಧಾಂತದ ಮೂಲಕ ಆಧ್ಯಾತ್ಮಿಕ ಏಕತೆಯನ್ನು ಸಾಧಿಸಿದ ಪರಮ ಪುರುಷೋತ್ತಮರಾದ, ಈ ದೇಶದ ಧರ್ಮೋತ್ಥಾನಕ್ಕೆ ಕಾರಣೀಭೂತರಾದ ಶಂಕರಾಚಾರ್ಯರ ಪಾವನ ಜಯಂತಿಯಂದು ನೀಡಲಾದ ಈ ಪ್ರಶಸ್ತಿಯು ನನಗೆ ದೊರಕಿದ ಸೌಭಾಗ್ಯ ಎಂದು ಭಾವಿಸುವೆ. ಈ ಪ್ರಶಸ್ತಿಯು ನಮ್ಮ ಕರ್ಣಾಟಕ ಬ್ಯಾಂಕ್ ಹಾಗೂ ಬ್ಯಾಂಕಿನ ಸಿಬ್ಬಂದಿಗೆ ಸಂದ ಗೌರವವಾಗಿದ್ದು, ನನ್ನ ಸಮಾಜಮುಖಿ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.