ಪುತ್ತೂರು: ನಮ್ಮ ಬದುಕಿನಲ್ಲಿ ಎದುರಾಗುವ ಅವಘಡಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ವಿಮೆ ಮಾಡಿಸಿಕೊಳ್ಳುವುದು ಅಗತ್ಯ. ಆಪತ್ಕಾಲದಲ್ಲಿ ವಿಮೆಯೇ ರಕ್ಷಾ ಕವಚವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಒಳಮೊಗ್ರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.
ಪುತ್ತೂರು ತಾಲ್ಲೂಕಿನ ಕುಂಬ್ರದ ನವೋದಯ ರೈತ ಸಭಾಭವನದಲ್ಲಿ ದ.ಕ. ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ನ ಕುಂಬ್ರ ಶಾಖೆ ವತಿಯಿಂದ ನಡೆದ ಜನ ಸುರಕ್ಷಾ ಯೋಜನೆಗಳ ಸಂಪೂರ್ಣ ಅಭಿಯಾನ-ಗ್ರಾಮ ಪಂಚಾಯಿತಿ ಮಟ್ಟದ ಮಾಹಿತಿ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನಾವು ವಿಮೆ ಮಾಡಿಸಿಕೊಳ್ಳುವ ಜತೆಗೆ ಕುಟುಂಬದವರನ್ನೂ ವಿಮೆಗೆ ಒಳಪಡಿಸುವುದು ಅಗತ್ಯ. ಪ್ರತಿಯೊಬ್ಬರೂ ಪಿಎಂಎಸ್ಬಿವೈ ಮತ್ತು ಪಿಎಂಜೆಜೆವೈ ವಿಮೆಯನ್ನು ಮಾಡಿಸಿಕೊಳ್ಳಬೇಕು ಎಂದರು ಸಲಹೆ ನೀಡಿದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಅಮೂಲ್ಯ ಆರ್ಥಿಕ ಸಾಕ್ಷಾರತಾ ಕೇಂದ್ರದ ಆಪ್ತ ಸಮಾಲೋಚಕಿ ಗೀತಾ, ಮಾತನಾಡಿ, ಖಾತೆ ಹೊಂದಿರುವ ಬ್ಯಾಂಕ್ನಲ್ಲೇ ವಿಮೆ ಮಾಡಿಸಿಕೊಳ್ಳಬೇಕು. ಖಾತೆಗಳಿಗೆ ಕೆವೈಸಿ ಮಾಡಿಸಿಕೊಳ್ಳುವ ಮೂಲಕ ಪರಿಷ್ಕರಣೆ ಮಾಡಿಸಿಕೊಳ್ಳಬೇಕು. ವಿಮೆ ಮಾಡಿಸಿಕೊಳ್ಳುವಾಗ ನೀಡುವ ನಾಮಿನಿಯ ಹೆಸರು ಸಮರ್ಪಕವಾಗಿರದಿದ್ದರೆ ಸಮಸ್ಯೆಯಾಗುತ್ತದೆ. ಹೃದಯಾಘಾತವು ಅಪಘಾತ ವಿಮೆಯ ವ್ಯಾಪ್ತಿಯಲ್ಲಿ ಸೇರುವುದಿಲ್ಲ. ಅದಕ್ಕೆ ಆರೋಗ್ಯ ವಿಮೆಯೇ ಮಾಡಿಸಿಕೊಳ್ಳಬೇಕಾಗುತ್ತದೆ ಎಂದು ಮಾಹಿತಿ ನೀಡಿದರು.
ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಕಕ್ಷ ಪ್ರಕಾಶ್ಚಂದ್ರ ರೈ ಕೈಕಾರ ಅವರು ಮಾತನಾಡಿದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕುಂಬ್ರ ಶಾಖೆಯ ಸಿಬ್ಬಂದಿ ಕಿಶೋರ್ ಕುಮಾರ್ ಅವರು ಬ್ಯಾಂಕ್ನಿಂದ ಗ್ರಾಹಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭವಾನಿ ಬಿ.ಆರ್. ಭಾಗವಹಿಸಿದ್ದರು.
ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಕುಂಬ್ರ ಶಾಖೆಯ ಮ್ಯಾನೇಜರ್ ವಿಶ್ವನಾಥ ಎಸ್. ಸ್ವಾಗತಿಸಿದರು. ಭಾರತೀಯ ಜೀವ ವಿಮಾ ನಿಗಮದ ಮುಖ್ಯ ವಿಮಾ ಸಲಹೆಗಾರ ನಾರಾಯಣ ಕುಕ್ಕುಪುಣಿ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.