ಪುತ್ತೂರು: ಪುತ್ತೂರಿನ ಮಹಾಲಿಂಗೇಶ್ವರ ದೇವಳದ ಎದುರಿನ ದೇವರಮಾರು ಗದ್ದೆಯಲ್ಲಿ 30ನೇ ವರ್ಷದ ಕೋಟಿ-ಚೆನ್ನಯ ಜೋಡುಕರೆ ಕಂಬಳ 2023ರ ಜನವರಿ 28ರಂದು ನಡೆಯಲಿದೆ.
ಪುತ್ತೂರು ಬೊಳುವಾರಿನ ಉದಯಗಿರಿ ಹೋಟೆಲ್ ಸಭಾಂಗಣದಲ್ಲಿ ಗುರುವಾರ ಕಂಬಳ ಸಮಿತಿಯ ಗೌರವ ಅಧ್ಯಕ್ಷ, ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಪೂರ್ವಭಾವಿ ಸಭೆ ನಡೆಯಿತು.
ವಿನಯಕುಮಾರ್ ಸೊರಕೆ ಮಾತನಾಡಿ, ‘ಪುತ್ತೂರು ಕಂಬಳ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಆರ್ಶೀವಾದದಲ್ಲಿ ನಡೆಯುವುದರಿಂದ ಅವರನ್ನು ಭೇಟಿಯಾಗಿ ಮಾರ್ಗದರ್ಶನ ಪಡೆದು ಮುನ್ನಡೆಯಬೇಕು’ ಎಂದರು. ಕಂಬಳ ಕೂಟಕ್ಕೆ ವಿಶೇಷ ಆಕರ್ಷಣೆಯಾಗಿ ರಿಷಬ್ ಶೆಟ್ಟಿ ಸೇರಿದಂತೆ ಕಾಂತಾರ ಚಿತ್ರತಂಡವನ್ನು ಕರೆತರುವ ಬಗ್ಗೆ ಚರ್ಚಿಸಲಾಯಿತು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿದರು. ಕಂಬಳ ಸಮಿತಿ ಅಧ್ಯಕ್ಷ ಎನ್.ಚಂದ್ರಹಾಸ ಶೆಟ್ಟಿ ಮಾತನಾಡಿ, ‘ಪುತ್ತೂರು ಕಂಬಳ ನಡೆದು ಬಂದ ಹಾದಿಯ ಕುರಿತು ಸ್ಮರಣ ಸಂಚಿಕೆ ಹೊರತರಲು ಉದ್ದೇಶಿಸಲಾಗಿದೆ’ ಎಂದರು.
ಕಂಬಳ ಸ್ಮರಣ ಸಂಚಿಕೆ ಹೊರತರಲು ವಸಂತ ಕುಮಾರ್ ರೈ ದುಗ್ಗಳ, ದುರ್ಗಾಪ್ರಸಾದ್ ರೈ ಕುಂಬ್ರ, ಭಾಸ್ಕರ್ ಗೌಡ ಕೊಡಿಂಬಾಳ, ಮಹಮ್ಮದ್ ಬಡಗನ್ನೂರು, ನಿರಂಜನ್ ರೈ ಮಠಂತಬೆಟ್ಟು ಅವರನ್ನೊಳಗೊಂಡ ಸಮಿತಿ ರಚಿಸಲಾಯಿತು.
`ಪುತ್ತೂರು ಕಂಬಳ' ಹೆಸರಿನ ಪೇಟೆಂಟ್ ಪಡೆಯುವ ಬಗ್ಗೆ ವಿದ್ಯಾಮಾತ ಅಕಾಡೆಮಿಯ ಭಾಗ್ಯೇಶ್ ರೈ ಅವರು ಪ್ರಸ್ತಾಪಿಸಿದರು. ಕೋಶಾಧಿಕಾರಿ ಪಂಜಿಗುಡ್ಡೆ ಈಶ್ವರ ಭಟ್ ವಂದಿಸಿದರು. ನಿರಂಜನ್ ರೈ ಮಠಂತಬೆಟ್ಟು ನಿರೂಪಿಸಿದರು. ದಿನೇಶ್ ಪಿ.ವಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.