ADVERTISEMENT

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ಜಿ.ಎಂ. ಭೇಟಿ; ‍ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 5:04 IST
Last Updated 17 ನವೆಂಬರ್ 2025, 5:04 IST
ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣಕ್ಕೆ ರೈಲ್ವೆ ಜನರಲ್‌ ಮ್ಯಾನೇಜರ್‌ ಮುಕುಲ್ ಶರಣ್ ಮಾಥುರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು
ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣಕ್ಕೆ ರೈಲ್ವೆ ಜನರಲ್‌ ಮ್ಯಾನೇಜರ್‌ ಮುಕುಲ್ ಶರಣ್ ಮಾಥುರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು   

ಸುಬ್ರಹ್ಮಣ್ಯ: ನೆಟ್ಟಣದ ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಮುಕುಲ್ ಶರಣ್ ಮಾಥುರ್ ಅವರು ಭೇಟಿ ನೀಡಿ ನಿಲ್ದಾಣದ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಬಳಿಕ ಬಳಕೆದಾರರ ಅಹವಾಲು ಆಲಿಸಿದರು.

ಸುಬ್ರಹ್ಮಣ್ಯ ರೋಡ್ ರೈಲು ನಿಲ್ದಾಣದಲ್ಲಿ ಪ್ರಗತಿಯಲ್ಲಿರುವ ಅಮೃತ್ ಭಾರತ್ ನಿಲ್ದಾಣ ಯೋಜನೆಯ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು. ನಿಲ್ದಾಣದಲ್ಲಿ ಪ್ರಯಾಣಿಕ ಸೌಲಭ್ಯಗಳು, ಅಭಿವೃದ್ಧಿ ಕಾರ್ಯಗಳು ಮತ್ತು ಸೇವಾ ಗುಣಮಟ್ಟವನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ವಿವಿಧ ಅಂಶಗಳನ್ನು ಅವಲೋಕಿಸಿದರು. ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಮುದಿತ್ ಮಿತ್ತಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಬಳಿಕ ಸಕಲೇಶಪುರ ಘಾಟ್ ಸೆಕ್ಷನ್‌ನ ವಿದ್ಯುದ್ದೀಕರಣ ಕಾರ್ಯಗಳನ್ನೂ ಪರಿಶೀಲಿಸಿದರು. ಹೊಸದಾಗಿ ವಿದ್ಯುದೀಕೃತಗೊಳ್ಳುತ್ತಿರುವ ಭಾಗದ ಸಿದ್ಧತೆ ಹಾಗೂ ಭದ್ರತಾ ಮಾನದಂಡಗಳನ್ನು ಪರಿಶೀಲಿಸಿದರು. ಜತೆಗೆ ಸುಬ್ರಹ್ಮಣ್ಯ ರಸ್ತೆ ಮತ್ತು ಹಾಸನ ನಡುವಿನ ವಿಭಾಗದಲ್ಲಿ ವಿಂಡೋ ಟ್ರೈಯಾಂಗಲ್ ಪರಿಶೀಲನೆ ನಡೆಸಲಾಗಿದ್ದು, ರೈಲ್ವೆ ಹಳಿಗಳ ಸ್ಥಿತಿ, ಸಿಗ್ನಲ್ ವ್ಯವಸ್ಥೆಗಳು ಹಾಗೂ ಸುರಕ್ಷತೆ ಮತ್ತು ಸುಗಮ ರೈಲು ಸಂಚಾರಕ್ಕೆ ಅಗತ್ಯವಿರುವ ಇತರೆ ಕಾರ್ಯಾಚರಣೆ ಅಂಶಗಳ ಮೌಲ್ಯಮಾಪನ ಮಾಡಿದರು.

ADVERTISEMENT

ಮುಕುಲ್ ಸರನ್ ಮಾಥುರ್, ಮುದಿತ್ ಮಿತ್ತಲ್ ಅವರು ಸುಬ್ರಹ್ಮಣ್ಯ ರಸ್ತೆ ನಿಲ್ದಾಣದಲ್ಲಿ ಪ್ರಯಾಣಿಕರೊಂದಿಗೆ ಸಂವಹನ ನಡೆಸಿ, ರೈಲ್ವೆ ಸೌಲಭ್ಯಗಳು, ಸೇವೆಗಳು ಮತ್ತು ಪ್ರಯಾಣ ಅನುಭವದ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದರು. ಹಿರಿಯ ಅಧಿಕಾರಿಗಳು ಕೂಡ ಭಾಗವಹಿಸಿ ಪ್ರಯಾಣಿಕರಿಂದ ದೊರೆತ ಸಲಹೆಗಳನ್ನು ದಾಖಲಿಸಿಕೊಂಡು ತ್ವರಿತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಜಿಎಂ ಅವರನ್ನು ಭೇಟಿ ಮಾಡಿದ  ತಮ್ಮ ವಿವಿಧ ಬೇಡಿಕೆಗಳನ್ನು ಸಲ್ಲಿಸಿದರು.

ಸುಬ್ರಹ್ಮಣ್ಯ ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳು ನಿಧಾನಗತಿಯಲ್ಲಿದ್ದು, ಕಾಮಗಾರಿಗೆ ವೇಗ ನೀಡಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಬೇಕು, ಸುಬ್ರಹ್ಮಣ್ಯ ನಿಲ್ದಾಣವನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕು. ಪರಂಗಿಪೇಟೆಯಲ್ಲಿ ಸ್ಥಗಿತ ಮಾಡಲಾದ ನಿಲ್ದಾಣವನ್ನು 6 ಲೈನ್‌ಗಳನ್ನೊಳಗೊಂಡ ಪ್ರಮುಖ ನಿಲ್ದಾಣವನ್ನಾಗಿ ಮಾಡಬೇಕು. ನೇರಳಕಟ್ಟೆ ನಿಲ್ದಾಣದಲ್ಲಿ ರೈಲ್ವೆ ಮೇಲ್ಸುತುವೆ ನಿರ್ಮಿಸಬೇಕು. ಕಬಕಪುತ್ತೂರು ನಿಲ್ದಾಣದಲ್ಲಿ ಎರಡನೇ ಪ್ಲಾಟ್‌ಫಾರ್ಮ್‌ ಕಾಮಗಾರಿ ಮುಕ್ತಾಯಗೊಳಿಸಿ ಲಿಫ್ಟ್, ಎರಡನೇ ಮೇಲ್ಸುತುವೆ ನಿರ್ಮಿಸಬೇಕು. ಸಕಲೇಶಪುರ ಡಬ್ಲಿಂಗ್‌ಗೆ ಬಿಡುಗಡೆಯಾದ ಹಣವನ್ನು ಮಂಗಳೂರಿನ ಪಡೀಲಿನಿಂದ ಸುಬ್ರಹ್ಮಣ್ಯದವರೆಗೆ ಡಬ್ಲಿಂಗ್ ಕೆಲಸಕ್ಕೆ ವರ್ಗಾಯಿಸಿ ವಿದ್ಯುತ್ ಲೈನ್ ಅಳವಡಿಕೆಯೊಂದಿಗೆ ಯೋಜನೆ ರೂಪಿಸಬೇಕು. ಕಣ್ಣೂರು-ಬೆಂಗಳೂರು ರೈಲಿಗೆ ಹೆಚ್ಚುವರಿ ಬೋಗಿ ಅಳವಡಿಸಬೇಕು ಎಂಬ ಬೇಡಿಕೆಗಳ ಒಳಗೊಂಡ ಮನವಿಯನ್ನು ರೈಲ್ವೆ ಬಳಕೆದಾರರು ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಸಲ್ಲಿಸಿದರು.

ಕುಕ್ಕೆ ಶ್ರೀ ಸುಬ್ರಹ್ಮಣ್ಯ -ಮಂಗಳೂರು ರೈಲು ಬಳಕೆದಾರರ ಹಿತರಕ್ಷಣಾ ವೇದಿಕೆ ಸಂಚಾಲಕ ಸುದರ್ಶನ್ ಪುತ್ತೂರು, ನೆಟ್ಟಣ ರೈಲು ಬಳಕೆದಾರರ ಸಂಘದ ಅಧ್ಯಕ್ಷ ಪ್ರಸಾದ್ ಕೆ.ಜಿ., ಮತ್ತಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.