ಬಾಳೆಹೊನ್ನೂರು: ಭಾನುವಾರ ಸುಮಾರು ಒಂದು ಗಂಟೆ ಮಳೆ ಸುರಿದ ಪರಿಣಾಮ ಜನಜೀವನ ಅಸ್ತವ್ಯಸ್ತಗೊಂಡಿತು.
ಮಳೆಯಿಂದಾಗಿ ಪಟ್ಟಣದ ರಸ್ತೆಗಳು ಹಳ್ಳದಂತೆ ತುಂಬಿ ಹರಿದವು. ಪೊಲೀಸ್ ಠಾಣೆಯ ಕಾಂಪೌಂಡ್ ಕುಸಿದು ಪಕ್ಕದ ಪ್ರಕಾಶ್ ಚಪ್ಪಲಿ ಅಂಗಡಿ ಮೇಲೆ ಬಿತ್ತು. ಪತ್ರಿಕಾ ವಿತರಕ ನಾಗರಾಜ್ ಭಟ್ ಮನೆ ಕಾಂಪೌಂಡ್ ಕುಸಿದಿದ್ದು ಮನೆಯ ಒಳಗೆ ನೀರು ನುಗ್ಗಿದೆ. ಅಲ್ಲದೆ ನರಸಿಂಹರಾಜಪುರ ರಸ್ತೆಯಲ್ಲಿರುವ ಹಲವು ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ.
ಕಳಸ-ಬಾಳೆಹೊನ್ನೂರು ನಡುವಿನ ಮಹಾಲ್ ಗೋಡುನಲ್ಲಿ ಮುಖ್ಯ ರಸ್ತೆ ಮೇಲೆ ಹಳ್ಳದ ನೀರು ತುಂಬಿ ಹರಿದ ಪರಿಣಾಮ ಕೆಲ ಹೊತ್ತು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಸೀಕೆ ಬಳಿಯೂ ಹಳ್ಳದ ನೀರು ಉಕ್ಕಿ ಹರಿಯಿತು.
ಚಿಕ್ಕಮಗಳೂರು ವರದಿ: ನಗರದ ಮತ್ತು ಸುತ್ತಲಿನ ಪ್ರದೇಶದಲ್ಲಿ ಭಾನುವಾರ ಸಂಜೆ ಮಳೆಯಾಗಿದೆ. ಗುಡುಗು, ಮಿಂಚಿನ ಆರ್ಭಟ ಇತ್ತು.
ಸುಮಾರು ಅರ್ಧ ತಾಸು ಮಳೆ ಸುರಿಯಿತು. ರಸ್ತೆಗಳ ಗುಂಡಿಗಳಲ್ಲಿ ನೀರು ಆವರಿಸಿದೆ. ರಸ್ತೆಗಳು ಕೆಸರುಮಯವಾಗಿ ಓಡಾಟ ಫಜೀತಿಯಾಗಿದೆ.
ನರಸಿಂಹರಾಜಪುರ ವರದಿ: ಪಟ್ಟಣದ ವ್ಯಾಪ್ತಿಯಲ್ಲಿ ಭಾನುವಾರ ಮಧ್ಯಾಹ್ನ ಗುಡುಗು ಸಹಿತ ಉತ್ತಮ ಮಳೆ ಸುರಿಯಿತು. ಬೆಳಿಗ್ಗೆಯಿಂದ ಬಿಸಿಲಿನ ವಾತಾವರಣವಿತ್ತು. ಅಲ್ಲದೆ ತಾಪಮಾನವೂ ಸಹ ಹೆಚ್ಚಾಗಿತ್ತು. ಮಧ್ಯಾಹ್ನ ಮೋಡ ಕವಿದು, ಬಳಿಕ ಗುಡುಗು ಸಹಿತ ಭಾರಿ ಮಳೆ ಸುರಿಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.