ಬೆಳ್ತಂಗಡಿ: ತಾಲ್ಲೂಕಿನಾದ್ಯಂತ ಬುಧವಾರ ಸಂಜೆ ಗುಡುಗು– ಗಾಳಿ ಸಹಿತ ಉತ್ತಮ ಮಳೆಯಾಗಿದ್ದು, ಕೆಲವೆಡೆ ಹಾನಿಯಾದ ವರದಿಯಾಗಿದೆ.
ಮರೋಡಿ ಗ್ರಾಮದ ಕುಡ್ಯರಬೆಟ್ಟು ಯಶೋಧರ ಬಂಗೇರ ಅವರ ಮನೆಗೆ ಸಿಡಿಲು ಬಡಿದು, ವಿದ್ಯುತ್ ಉಪಕರಣ ಗಳಿಗೆ ಹಾನಿಯಾಗಿದೆ. ದನವೊಂದು ಸ್ಥಳದಲ್ಲಿಯೇ ಮೃತಪಟ್ಟಿದೆ.
ಬೆಳ್ತಂಗಡಿ– ಉಪ್ಪಿನಂಗಡಿ ಹೆದ್ದಾರಿಯ ಉರುವಾಲು ಗ್ರಾಮದ ಹಲೇಜಿ ಬಳಿ ಸಂಜೀವ ಮೂಲ್ಯ ಅವರ ಅಂಗಳದಲ್ಲಿದ್ದ ತೆಂಗಿನ ಮರವೊಂದು ರಸ್ತೆಗೆ ಬಿದ್ದು, ಒಂದು ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ಇದರಿಂದ ಕೆಲ ಹೊತ್ತು ರಸ್ತೆ ಸಂಚಾರಕ್ಕೆ ತಡೆಯಾಗಿದ್ದು, ಸ್ಥಳೀಯರು ಮರವನ್ನು ತೆರವುಗೊಳಿಸಿದರು.
ಉರುವಾಲು ಗ್ರಾಮದ ಹಲೇಜಿ ಬಳಿ ಸುಧೀರ್ ಕೆ.ಎನ್. ಅವರ 10 ಅಡಿಕೆ ಮರ, ಹಲೇಜಿ ಸುಶೃತ ಭಟ್ ಅವರ 15 ಅಡಿಕೆ ಮರ, ಮಚ್ಚಿನ ಗ್ರಾಮದ ಕಲಾಯಿ ಪ್ರಶಾಂತ್ ಅವರ 5 ಅಡಿಕೆ ಗಿಡ ಧರೆಗೆ ಉರುಳಿವೆ. ಪ್ರಶಾಂತ್ ಅವರ ಪಂಪ್ಶೆಡ್ ಮೇಲೆ ಮರ ಬಿದ್ದು ಹಾನಿಯಾಗಿದೆ. ಗರ್ಡಾಡಿ ಉದಲೋಡಿ ವಸಂತ ಭಂಡಾರಿ ಮನೆಗೆ ಸಿಡಿಲು ಬಡಿದು ಮನೆಗೆ ಹಾನಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.