ಸುಬ್ರಹ್ಮಣ್ಯ: ಕಡಬ ತಾಲ್ಲೂಕಿನಾದ್ಯಂತ ಬುಧವಾರ ಸಂಜೆಯ ಗುಡುಗು ಸಹಿತ ಭಾರಿ ಗಾಳಿ ಮಳೆಗೆ ಮನೆ, ವಿದ್ಯುತ್ ಕಂಬ, ಕೃಷಿಗೆ ಹಾನಿಯಾಗಿದೆ. ಘಟನಾ ಸ್ಥಳಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಸುಬ್ರಹ್ಮಣ್ಯ ಹಾಗೂ ಪಂಜ ಪರಿಸರದಲ್ಲಿ ಗಾಳಿ ಮಳೆಗೆ ಅಪಾರ ಹಾನಿ ಉಂಟಾಗಿದೆ. ಐನೆಕಿದು ಗ್ರಾಮದ ಕೋಟೆ ವಿಜಯ ಎಂಬುವವರ ಮನೆ ಮೇಲೆ ಮರ ಬಿದ್ದು ಹಾನಿಯುಂಟಾಗಿದೆ. ಏನೆಕಲ್ಲು ಗ್ರಾಮದಲ್ಲಿ ಅಂಗಡಿ ಶೀಟು ಗಾಳಿಗೆ ಹಾರಿ ಹೋಗಿದೆ. ಗ್ರಾಮ ಪಂಚಾಯಿತಿ ಸಂಜೀವಿನಿ ಕಟ್ಟಡದ ಎದುರಿನ ತಾತ್ಕಾಲಿಕ ತರಕಾರಿ ಅಂಗಡಿ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ.
ಪಂಜದ ಕೃಷ್ಣನಗರ ಕೂತ್ಕುಂಜ ಗ್ರಾಮದ ದಾಮೋದರ ಬೆಳ್ಚಪಾಡ ಎಂಬುವವರ ಮನೆ ಮೇಲೆ ಹಲಸಿನ ಮರದ ಕೊಂಬೆ ಬಿದ್ದು ಮನೆ ಜಖಂ ಗೊಂಡಿದೆ. ಮನೆ ಮಂದಿ ಅಪಾಯ ದಿಂದ ಪಾರಾಗಿದ್ದಾರೆ. ಪಂಬೆತ್ತಾಡಿ ಗ್ರಾಮದ ಚಿದಾನಂದ ಅವರ ಮನೆ ಮೇಲೆ ರಬ್ಬರ್ ಮರಗಳು ಬಿದ್ದು ಹಾನಿ ಯಾಗಿದೆ. ಪಂಜ ದೇವಳದ ಗರಡಿಬೈಲು ನಾಗನ ಕಟ್ಟೆಗೆ ಮರ ಬಿದ್ದಿದೆ. ಅಲ್ಲದೆ, ಹಲವೆಡೆ ಕೃಷಿ ತೋಟಗಳ ಅಡಿಕೆ, ತೆಂಗು, ರಬ್ಬರ್, ಬಾಳೆ ಗಿಡಗಳಿಗೂ ವ್ಯಾಪಕ ಹಾನಿ ಸಂಭವಿಸಿದೆ.
ಪರಿಶೀಲನೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಪತ್ತು ನಿರ್ವಹಣಾ ತಂಡದವರು ಹಲವೆಡೆ ಮರಗಳನ್ನು ತೆರವುಗೊಳಿಸಲು ಸಹಕರಿಸಿದರು. ಪಂಬೆತ್ತಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮಹೇಶ್ ಕುಮಾರ್ ಕರಿಕ್ಕಳ, ರಜೀತಾ ಭಟ್ ಅವರು ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಊರವರ ಸಹಕಾರದೊಂದಿಗೆ ಮರಗಳ ತೆರವಿಗೆ ಸಹಕರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.