ADVERTISEMENT

ಬೆಳಿಗ್ಗೆ 7 ರಿಂದ ಪಡಿತರ ವಿತರಣೆ ಆರಂಭ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 22 ಮೇ 2021, 3:58 IST
Last Updated 22 ಮೇ 2021, 3:58 IST
ಮಣ್ಣುಗುಡ್ಡೆಯ ನ್ಯಾಯಬೆಲೆ ಅಂಗಡಿ ಎದುರು ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡಲಾಗಿದೆ.
ಮಣ್ಣುಗುಡ್ಡೆಯ ನ್ಯಾಯಬೆಲೆ ಅಂಗಡಿ ಎದುರು ಕುಳಿತುಕೊಳ್ಳಲು ಕುರ್ಚಿ ವ್ಯವಸ್ಥೆ ಮಾಡಲಾಗಿದೆ.   

ಮಂಗಳೂರು: ನ್ಯಾಯಬೆಲೆ ಅಂಗಡಿದಾರರು ಬೆಳಿಗ್ಗೆ 7 ಗಂಟೆಗೆ ಪಡಿತರ ವಿತರಣೆ ಆರಂಭಿಸಬೇಕು. ಪಡಿತರ ಚೀಟಿದಾರರು ದಟ್ಟಣೆಯಾದಲ್ಲಿ ಆದ್ಯತೆ ಮೇರೆಗೆ ಸಾಲಿನಲ್ಲಿ ನಿಲ್ಲಲು ಕ್ಯೂ ಸ್ಲಿಪ್ ಅಥವಾ ಟೋಕನ್ ನೀಡಿ ಪಡಿತರ ವಿತರಿಸಬೇಕು. 10 ಗಂಟೆಯ ನಂತರವೂ ಕ್ಯೂನಲ್ಲಿದ್ದ ಪಡಿತರ ಚೀಟಿದಾರರನ್ನು ಹಿಂದಕ್ಕೆ ಕಳುಹಿಸದೇ ಕಡ್ಡಾಯವಾಗಿ ಪಡಿತರ ವಿತರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಸೂಚನೆ ನೀಡಿದ್ದಾರೆ.

ಆಧಾರ್ ಒಟಿಪಿ ಸೌಲಭ್ಯವನ್ನು ಒದಗಿಸಿರುವುದರಿಂದ ಗೊಂದಲಕ್ಕೆ ಒಳಗಾಗದೆ ಪಡಿತರ ವಿತರಿಸಬೇಕು. ಪಡಿತರ ಚೀಟಿದಾರರು ಬಯೋಮೆಟ್ರಿಕ್ ಕೊಡಲು ಒತ್ತಾಯಿಸಬಾರದು. ಮೇ ತಿಂಗಳಿನ ವಿತರಣಾ ಪ್ರಮಾಣದ ಫಲಕ ಅಳವಡಿಸಬೇಕು. ಕಡಿಮೆ ಪ್ರಮಾಣದಲ್ಲಿ ಪಡಿತರ ವಿತರಿಸುವಂತಿಲ್ಲ. ಬೆಳ್ತಿಗೆ ಹಾಗೂ ಕುಚ್ಚಲಕ್ಕಿಯನ್ನು ಸಮ ಪ್ರಮಾಣದಲ್ಲಿ ವಿತರಿಸಬೇಕು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಉಚಿತವಾಗಿ ಪಡಿತರ ವಿತರಿಬೇಕು ಎಂದು ಸೂಚಿಸಿದ್ದಾರೆ.

ಕಾನೂನು ಬಾಹಿರವಾಗಿ ಹಣ ಪಡೆಯಬಾರದು. ಪಡಿತರ ಚೀಟಿದಾರರೊಂದಿಗೆ ಸೌಹಾರ್ದಯುತ ವಾಗಿ ವರ್ತಿಸಬೇಕು. ಪಡಿತರ ವಿತರಣೆಗೆ ಜನ ದಟ್ಟಣೆಯಾಗದಂತೆ ಹಾಗೂ ಸುವ್ಯವಸ್ಥೆ ಕಾಪಾಡಲು ಈಗಾಗಲೇ ಪೊಲೀಸ್‌ ಸಿಬ್ಬಂದಿ ನಿಯೋಜಿಸಿದ್ದು, ಸಮಸ್ಯೆ ಆಗದಂತೆ ರೀತಿಯಲ್ಲಿ ಪಡಿತರ ವಿತರಣೆ ಮಾಡುವಂತೆ ತಿಳಿಸಿದ್ದಾರೆ.

ADVERTISEMENT

ಹೊರ ಜಿಲ್ಲೆಯ ಪಡಿತರ ಚೀಟಿದಾರರು ದಾಸ್ತಾನು ಇರುವ ಸಮೀಪದ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುವಂತೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.