ADVERTISEMENT

ದರೋಡೆ ಪ್ರಕರಣ: 6 ಮಂದಿ ಬಂಧನ: ಶಶಿಕುಮಾರ್‌

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2021, 8:41 IST
Last Updated 15 ಏಪ್ರಿಲ್ 2021, 8:41 IST
   

ಮಂಗಳೂರು: ನಗರ ಸೇರಿದಂತೆ ಜಿಲ್ಲೆ, ಅಂತರ ರಾಜ್ಯಗಳಲ್ಲಿ ಮನೆಕಳವು, ದರೋಡೆ, ವಾಹನ ಸವಾರರನ್ನು ತಡೆದು ಹಣ ಸುಲಿಗೆ ಮಾಡುತ್ತಿದ್ದ 6 ಜನರ ತಂಡವನ್ನು ಬಂಧನ ಮಾಡಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಎನ್.‌ ಶಶಿಕುಮಾರ್‌ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಈ ಹಿಂದೆ 9 ಮಂದಿ ಆರೋಪಿಗಳನ್ನು ಬಂಧನ ಮಾಡಲಾಗಿತ್ತು. ಆರೋಪಿಗಳು ನೀಡಿದ ಮಾಹಿತಿ ಆಧಾರದ ಮೇಲೆ ಈಗ ಮತ್ತೆ 6 ಮಂದಿಯ ಬಂಧನ ಮಾಡಲಾಗಿದೆ. ಮೊಹಮ್ಮದ್‌ ಝಬೇರ್‌, ಇಬ್ರಾಹಿಂ ಲತೀಫ್‌, ರಾಜೇಶ್‌, ಅರ್ಜುನ್‌, ಮೋಹನ್‌, ಬೋಳಿಯಾರ್‌ ಮನ್ಸೂರ್‌ ಎಂಬುವವರನ್ನು ಬಂಧನ ಮಾಡಲಾಗಿದೆ. ಬಂಧಿತರಿಂದ ಇನ್ನೊವಾ ಕ್ರಿಸ್ಟ್‌, ಇನೊವಾ, ಐ 20 ಕಾರು ಸೇರಿದಂತೆ ಒಟ್ಟು ₹41.82 ಲಕ್ಷ ಮೌಲ್ಯದ ಸ್ವೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದರು.

ಮಂಗಳೂರು ನಗರದ ಮೂಡುಬಿದಿರೆ, ಮೂಲ್ಕಿ, ಬಜಪೆ, ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ, ಪುಂಜಾಲಕಟ್ಟೆ, ಹಾಸನ ಜಿಲ್ಲೆಯ ಹರೆಹಳ್ಳಿ, ಬೆಂಗಳೂರು ನಗರದ ವಿಜಯನಗರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ದರೋಡೆ, ಮನೆಕಳವು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಆರೋಪಿಗಳ ಭಾಗಿಯಾಗದ್ದು, ಇವರ ವಿರುದ್ಧ ಪ್ರಕರಣ ದಾಖಲಾಗಿವೆ. ಅಂತರ ರಾಜ್ಯದಲ್ಲಿಯೂ ಈ ತಂಡದ ಆರೋಪಿಗಳು ಕೃತ್ಯ ನಡೆಸಿರುವುದು ತನಿಖೆಯಿಂದ ತಿಳಿದು ಬಂದಿದ್ದು, ಒಟ್ಟು 28 ಪ್ರಕರಣಗಳು ಆರೋಪಿಗಳ ವಿರುದ್ಧ ದಾಖಲಾಗಿವೆ ಎಂದು ಅವರು ತಿಳಿಸಿದರು.

ADVERTISEMENT

ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್‌ ವಶಕ್ಕೆ ಪಡೆದು ವಾರಗಳ ಕಾಲ ತನಿಖೆ ನಡೆಸಲಾಗುತ್ತದೆ. ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ತಂಡದಲ್ಲಿ 50 ರಿಂದ 60 ಮಂದಿ ಇದ್ದಾರೆ. ಆರೋಪಿತರ ವಿರುದ್ಧ ಗೋ ಕಳವು ಪ್ರಕರಣಗಳು ಕೂಡ ದಾಖಲಾಗಿವೆ. ಈ ಪ್ರಕರಣದಲ್ಲಿ ಬಂಧನ ಮಾಡಿರುವ ಆರೋಪಿಗಳ ತನಿಖೆ ಮುಂದುವರೆದಿದ್ದು, ಇವರ ಕೃತ್ಯಕ್ಕೆ ವಾಹನ, ಹಣಕಾಸಿನ ನೆರವು, ತಲೆಮರೆಸಿಕೊಳ್ಳಲು ಸಹಾಯ ಮಾಡಿದವರನ್ನು ಕೂಡ ತನಿಖೆಗೆ ಒಳಪಡಿಸಲಾಗುತ್ತದೆ. ಈ ತಂಡವನ್ನು ಪತ್ತೆ ಮಾಡಿದ ಉತ್ತರ ಉಪ ವಿಭಾಗದ ಎಸಿಪಿ ಮಹೇಶ್‌ ಕುಮಾರ್‌ ಮತ್ತು ಮೂಡುಬಿದಿರೆ ಠಾಣೆಯ ಇನ್‌ಸ್ಪೆಕ್ಟರ್‌ ದಿನೇಶ್‌ ಕುಮಾರ್‌ ಅವರ ತಂಡದ ಕಾರ್ಯಕ್ಕೆ ಪೊಲೀಸ್‌ ಕಮಿಷನರ್‌ ಎನ್‌. ಶಶಿಕುಮಾರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ಹರಿರಾಂ ಶಂಕರ್‌ ಹಾಗೂ ವಿನಯ್‌ ಗಾಂವಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.