ADVERTISEMENT

ಸಲೂನ್ ದಾಳಿ ಪ್ರಕರಣ: ಬಂಧಿತ ಪ್ರಸಾದ್‌ ಮೊಬೈಲ್‌ನಲ್ಲಿ ಪ್ರಾಣಿಬಲಿ ವಿಡಿಯೊ ಪತ್ತೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2025, 14:11 IST
Last Updated 31 ಜನವರಿ 2025, 14:11 IST
ಪ್ರಸಾದ್ ಅತ್ತಾವರ ಮೊಬೈಲ್ ಫೋನ್‌ನಲ್ಲಿ ದೊರೆತಿದೆ ಎನ್ನಲಾದ ವಾಮಾಚಾರ ನಡೆಸಿರುವ ಚಿತ್ರ
ಪ್ರಸಾದ್ ಅತ್ತಾವರ ಮೊಬೈಲ್ ಫೋನ್‌ನಲ್ಲಿ ದೊರೆತಿದೆ ಎನ್ನಲಾದ ವಾಮಾಚಾರ ನಡೆಸಿರುವ ಚಿತ್ರ   

ಮಂಗಳೂರು: ನಗರದ ಕಲರ್ಸ್‌ ಯೂನಿಸೆಕ್ಸ್ ಸಲೂನ್‌ ಮೇಲೆ ಗುಂಪೊಂದು ಈಚೆಗೆ ದಾಳಿ ನಡೆಸಿದ ಪ್ರಕರಣದಲ್ಲಿ ಬಂಧಿತನಾಗಿರುವ ರಾಮಸೇನೆಯ ಸಂಸ್ಥಾಪಕ ಪ್ರಸಾದ್ ಅತ್ತಾವರ ಮೊಬೈಲ್‌ ಫೋನ್‌ನಲ್ಲಿ ಪ್ರಾಣಿ ಬಲಿಗೆ ಸಂಬಂಧಿಸಿದ ಕೆಲ ಮಾಹಿತಿ ಲಭ್ಯವಾಗಿವೆ ಎಂದು ಪೊಲೀಸರು ಇಲ್ಲಿಯ ಬರ್ಕೆ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

‘ಜ.23ರಂದು ನಗರದ ಕಲರ್ಸ್ ಯೂನಿಸೆಕ್ಸ್‌ ಸಲೂನ್‌ ಮೇಲೆ ಅಕ್ರಮವಾಗಿ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಪ್ರಸಾದ್ ಅತ್ತಾವರ ಜೊತೆ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿತ್ತು. ಈ ಪ್ರಕರಣದ ತನಿಖೆಯ ಭಾಗವಾಗಿ ಪ್ರಸಾದ್ ಅತ್ತಾವರ ಮೊಬೈಲ್ ಫೋನ್ ಪರಿಶೀಲಿಸಿದಾಗ, ಅನಂತ್ ಭಟ್ ಎಂಬ ವ್ಯಕ್ತಿಯ ಜೊತೆ ವಾಮಾಚಾರದ ಬಗ್ಗೆ ವಾಟ್ಸ್‌ಆ್ಯಪ್‌ನಲ್ಲಿ ಚರ್ಚಿಸಿರುವ ಅನೇಕ ಸಂದೇಶಗಳು, ಚಿತ್ರಗಳು, ವಿಡಿಯೊಗಳು ದೊರೆತಿವೆ’ ಎಂದು ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗ್ರವಾಲ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ಚಿತ್ರದಲ್ಲಿ ಹಾಗೂ ಸಂದೇಶದಲ್ಲಿ ಇರುವಂತೆ, ದೇವಸ್ಥಾನವೊಂದರಲ್ಲಿ ಕುರಿ ಬಲಿ ಕೊಡಲಾಗಿದೆ. ಮೈಸೂರಿನ ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಹಾಗೂ ಗಂಗರಾಜು ಅವರ ಫೋಟೊ ಹಾಗೂ ಅವರಿಬ್ಬರ ಹೆಸರಿನ ಜೊತೆಗೆ ಪ್ರಸಾದ್ ಅತ್ತಾವರ, ಹರ್ಷ, ಶ್ರೀನಿಧಿ, ಸುಮ ಆಚಾರ್ಯ ಸೇರಿ ಒಟ್ಟು ಐವರ ಹೆಸರು ಬರೆದಿರುವ ಪೇಪರ್ ಅನ್ನು ದೇವಿಯ ಮೇಲೆ ಇಟ್ಟು ಅದಕ್ಕೆ ರಕ್ತದ ಅಭಿಷೇಕ ಮಾಡಲಾಗಿದೆ. ಅನಂತ್ ಭಟ್ ಮತ್ತು ಪ್ರಸಾದ್ ನಡುವೆ ವಿನಿಮಯ ಆಗಿರುವ ಸಂದೇಶ ನೋಡಿದರೆ, ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಅವರಿಗೆ ಬಲ ಸಿಗಲೆಂದು ಈ ರೀತಿ ಪೂಜೆ ಮಾಡಿರಬಹುದು ಅನ್ನಿಸುತ್ತದೆ’ ಎಂದು ಅಗ್ರವಾಲ್‌ ಹೇಳಿದರು.

ADVERTISEMENT

‘ಅನಂತ್ ಭಟ್ ಯಾರು, ಬಲಿ ನಡೆದಿರುವ ಸ್ಥಳ ಯಾವುದು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಪ್ರಸಾದ್ ಮೊಬೈಲ್ ಫೋನ್‌ನಲ್ಲಿ ಹಣ ತುಂಬಿಟ್ಟಿದ್ದ ಚೀಲದ ಫೋಟೊ ಇದ್ದು, ಅನಂತ್ ಭಟ್‌ಗೆ ಹಣ ವರ್ಗಾವಣೆ ಮಾಡಿರುವುದು ಕಂಡುಬಂದಿದೆ. ಈ ಚೀಲದ ಚಿತ್ರವನ್ನು 2024ರ ಡಿಸೆಂಬರ್ 7ರಂದು ಸುಮ ಆಚಾರ್ಯ, ಡಿ.8ರಂದು ಪ್ರಶಾಂತ ಬಂಗೇರ, ಹರ್ಷ ಮೈಸೂರು ಮತ್ತು ಅನಂತ್ ಭಟ್ ಅವರಿಗೆ ಪ್ರಸಾದ್ ಮೊಬೈಲ್‌ನಿಂದ ಕಳುಹಿಸಲಾಗಿದೆ. ಹರ್ಷ ಮತ್ತು ಶ್ರೀನಿಧಿ ಅವರು ಸ್ನೇಹಮಯಿ ಕೃಷ್ಣ ಮತ್ತು ಗಂಗರಾಜು ಭೇಟಿಯಾಗಿ ಮಾತನಾಡುತ್ತಿರುವ ಫೋಟೊ, ವಿಡಿಯೊವನ್ನು ಹರ್ಷ ಅವರು ಪ್ರಸಾದ್ ಅತ್ತಾವರ ಅವರಿಗೆ ಡಿ.9ರಂದು ಕಳುಹಿಸಿದ್ದಾರೆ. ಹಲವಾರು ಬಾರಿ ವಾಟ್ಸ್‌ಆ್ಯಪ್ ಕಾಲ್ ಮಾಡಿ ಮಾತನಾಡಿದ್ದಾರೆ’ ಎಂದು ಅವರು ವಿವರಿಸಿದರು.

ಪ್ರಸಾದ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದು, ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಪೊಲೀಸ್ ಕಸ್ಟಡಿಗೆ ಪಡೆದು, ವಿಚಾರಣೆ ನಡೆಸಿದ ಮೇಲೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಅವರು ಹೇಳಿದರು.

‘ಸಲೂನ್ ಮೇಲಿನ ದಾಳಿ ಪ್ರಕರಣದ ತನಿಖೆ ನಡೆಸುತ್ತಿರುವ ಬರ್ಕೆ ಠಾಣೆಯ ಇನ್‌ಸ್ಪೆಕ್ಟರ್ ಸೋಮಶೇಖರ್ ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಾಣಿ ಬಲಿ ನಿಷೇಧ ಇರುವ ಕಾರಣ ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ಕಾಯ್ದೆ 2017 ಅಡಿಯಲ್ಲಿ, ಪ್ರಸಾದ್ ಅತ್ತಾವರ ವಿರುದ್ಧ ಶುಕ್ರವಾರ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೇಪರ್ ಮೇಲೆ ಹೆಸರು ಬರೆದಿರುವ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಲಾಗುವುದು’ ಎಂದು ಅನುಪಮ್ ಅಗ್ರವಾಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.