ಮಂಗಳೂರು: ಕರಾವಳಿ ನಿಯಂತ್ರಣ ವಲಯ (ಸಿಆರ್ಜೆಡ್್)ದಲ್ಲಿ ಮರಳು ಗಣಿಗಾರಿಕೆ ಪ್ರಾರಂಭಿಸಲು ಅನುಮತಿ ನೀಡುವ ಕುರಿತು ಚರ್ಚಿಸಲು ಕರ್ನಾಟಕ ಕರಾವಳಿ ವಲಯ ನಿರ್ವಹಣೆ ಸಮಿತಿ (ಕೆಸಿಜೆಡ್ಎಂ) ಸಭೆ ಇದೇ 10 ರಂದು ಬೆಂಗಳೂರಿನಲ್ಲಿ ನಡೆಯಲಿದೆ.
ಈಗಾಗಲೇ ಜಿಲ್ಲಾಡಳಿತ ಕಳುಹಿಸಿರುವ ವರದಿಯನ್ನು ಸಮಿತಿ ಪರಿಶೀಲಿಸಲಿದ್ದು, ಸೆಪ್ಟೆಂಬರ್ ಮೊದಲ ವಾರದಿಂದ ಮರಳು ಗಣಿಗಾರಿಕೆ ಪ್ರಾರಂಭಿಸಲು ಅನುಮತಿ ನೀಡುವ ಸಾಧ್ಯತೆಯಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ತಿಂಗಳಿಂದ ಮರಳು ಗಣಿಗಾರಿಕೆ ಸಂಪೂರ್ಣವಾಗಿ ನಿಂತಿದೆ. ಎನ್ಐಟಿಕೆ ತಾಂತ್ರಿಕ ಸಮಿತಿಯು ನೇತ್ರಾವತಿ, ಫಲ್ಗುಣಿ ಮತ್ತು ಶಾಂಭವಿ ನದಿಗಳಲ್ಲಿನ ಹೊಸ ಮರಳು ದಿಬ್ಬಗಳನ್ನು ಗುರುತಿಸಿ, ಸಿದ್ಧಪಡಿಸಿದ ವರದಿಯನ್ನು ಜಿಲ್ಲಾಡಳಿತದ ಸಮಿತಿಯು ಪರಿಶೀಲಿಸಿದ್ದು, ಮೇನಲ್ಲಿ ಕೆಸಿಜೆಡ್ಎಂಗೆ ಕಳುಹಿಸಲಾಗಿದೆ. ಕೋವಿಡ್–19 ಸಾಂಕ್ರಾಮಿಕದಿಂದಾಗಿ ಕೆಸಿಜೆಡ್ಎಂ ಸಭೆ ನಡೆಸಲು ಸಾಧ್ಯವಾಗಿರಲಿಲ್ಲ.
‘ಜಿಲ್ಲೆಯ ಸಿಆರ್ಜೆಡ್ ವಲಯದಲ್ಲಿ ಮರಳು ಗಣಿಗಾರಿಕೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುವುದು. ಕೆಸಿಜೆಡ್ಎಂ ಸಭೆಯನ್ನು ಆಗಸ್ಟ್ 10 ರಂದು ನಡೆಯಲು ನಿರ್ಧರಿಸಲಾಗಿದೆ. ರಾಜ್ಯ ಸರ್ಕಾರದ ಹೊಸ ಮರಳು ನೀತಿಯ ಪ್ರಕಾರ ಸಿಆರ್ಜೆಡ್ಯೇತರ ಪ್ರದೇಶಗಳಲ್ಲಿ ಮರಳು ಗಣಿಗಾರಿಕೆಗಾಗಿ ಆಗಸ್ಟ್ 4 ರಂದು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಭೆ ಕರೆಯಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.