ಮಂಗಳೂರು: ನಗರದ ನೂತನ ಪೊಲೀಸ್ ಕಮಿಷನರ್ ಆಗಿ 2004ನೇ ವೃಂದದ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಶುಕ್ರವಾರ ಅಧಿಕಾರ ಸ್ವೀಕರಿಸಿದರು.
ಸಂದೀಪ್ ಪಾಟೀಲ್ ಅವರನ್ನು ಮಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಗೆ ವರ್ಗಾವಣೆ ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಬುಧವಾರ ಆದೇಶ ಹೊರಡಿಸಿತ್ತು. ಶುಕ್ರವಾರ ಮಧ್ಯಾಹ್ನ ಕಮಿಷನರ್ ಕಚೇರಿಗೆ ಬಂದ ಅವರು ನಿರ್ಗಮಿತ ಕಮಿಷನರ್ ಟಿ.ಆರ್.ಸುರೇಶ್ ಅವರಿಂದ ಅಧಿಕಾರ ಸ್ವೀಕರಿಸಿದರು.
ಸಂದೀಪ್ ಪಾಟೀಲ್ ಬಳ್ಳಾರಿ, ಕೊಡಗು, ದಾವಣಗೆರೆ, ಬೆಳಗಾವಿ ಎಸ್ ಪಿಯಾಗಿ, ಬೆಂಗಳೂರು ನಗರ ದ ಉತ್ತರ ಮತ್ತು ಕೇಂದ್ರ ಉಪ ವಿಭಾಗಗಳ ಡಿಸಿಪಿಯಾಗಿ, ಗುಪ್ತದಳದ ಎಸ್ ಪಿಯಾಗಿ ಕೆಲಸ ಮಾಡಿದ್ದಾರೆ. ಡಿಐಜಿಯಾಗಿ ಬಡ್ತಿ ಹೊಂದಿದ ಬಳಿಕ ರಾಜ್ಯ ಮೀಸಲು ಪೊಲೀಸ್ ಪಡೆ ಮತ್ತು ಬೆಂಗಳೂರು ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆಯ ಡಿಐಜಿಯಾಗಿದ್ದರು.
2003ರ ವೃಂದದ ಐಪಿಎಸ್ ಅಧಿಕಾರಿಯಾಗಿರುವ ಟಿ.ಆರ್.ಸುರೇಶ್ 2017ರ ಜೂನ್ 12ರಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಹುದ್ದೆಯ ಅಧಿಕಾರ ವಹಿಸಿಕೊಂಡಿದ್ದರು. ವಿಧಾನಸಭೆ ಚುನಾವಣೆ ಪ್ರಯುಕ್ತ 2018ರ ಏಪ್ರಿಲ್ 18ರಿಂದ ಜೂನ್ 18ರವರೆಗೆ ಬೇರೆಡೆ ವರ್ಗಾವಣೆ ಮಾಡಲಾಗಿತ್ತು. 2018ರ ಜೂನ್ 18ರಂದು ಮತ್ತೆ ಅಧಿಕಾರ ಸ್ವೀಕರಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.