ಮಂಗಳೂರು: ಮಳೆ ಬಂದು ತಂಪಾಗಿದ್ದ ಸಂಜೆಯಲ್ಲಿ ಸೇರಿದ್ದ ಸಂಗೀತ ಪ್ರಿಯರಿಗೆ ದ್ವಂದ್ವ ಗಾಯನದಲ್ಲಿ ತೇಲಿಬಂದ ಕೃತಿಗಳು ಮುದ ನೀಡಿದವು. ನಗರದ ಸ್ವರ ಲಯ ಸಾಧನಾ ಫೌಂಡೇಷನ್ ಭಾನುವಾರ ಆಯೋಜಿಸಿದ್ದ ಸಂಗೀತ ಶಿಬಿರ ಮತ್ತು ಕಚೇರಿಯಲ್ಲಿ ವಿದುಷಿ ಸಾವಿತ್ರಿ ಪ್ರಭಾಕರ್ ಹಾಗೂ ವಿದುಷಿ ಪಾವನಿ ನಾಗಸಿಂಹ ಅವರು ರಾಗ–ಲಯ ಸಾಗರದಲ್ಲಿ ಸಹೃದಯರು ಮಿಂದೇಳುವಂತೆ ಮಾಡಿದರು.
ಲೋಕನಾಯಕ ಎಂಬ ಕೃತಿಯ ಮೂಲಕ ಕಚೇರಿ ಆರಂಭಿಸಿದ ಅವರು ನಂತರ ‘ಎಂದರೊ ಮಹಾನುಭಾವುಲು..’ ಹಾಡಿದರು. ಸಂಗೀತ ಸಾಮ್ರಾಜ್ಯ ಸಂಚಾರಿಣಿ ಎಂಬ ಸರಸ್ವತಿ ಮಾತೆಯನ್ನು ಕೊಂಡಾಡುವ ರಾಮಮೂರ್ತಿಯವರ ಗೀತೆಯ ಮೂಲಕ ಭಕ್ತಿ ಸಂಚಲನ ಉಂಟುಮಾಡಿದರು. ಬ್ರೋಚೇವಾವರೆವರು.., ಭಾಗ್ಯದ ಲಕ್ಷ್ಮಿ ಬಾರಮ್ಮ.. ಮುಂತಾದ ಹಾಡುಗಳು ಕೂಡ ಇದ್ದವು. ವಿದ್ವಾನ್ ವಿಶ್ವಾಸ್ ಕೃಷ್ಣ ಪಿಟೀಲಿನಲ್ಲಿ, ವಿದ್ವಾನ್ ಪನ್ನಗ ಶರ್ಮನ್ ಹಾಗೂ ವಿದ್ವಾನ್ ನೈಬಿ ಪ್ರಭಾಕರ್ ಮೃದಂಗದಲ್ಲಿ ಸಹಕರಿಸಿದರು.
ಸಂಗೀತ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉದ್ಯಮಿ ಕೃಷ್ಣ ಜೆ.ಪಾಲೆಮಾರ್ ‘ಒತ್ತಡವನ್ನು ನಿಭಾಯಿಸಲು ಸಂಗೀತದಷ್ಟು ಉತ್ತಮ ಔಷಧ ಬೇರೆ ಇಲ್ಲ ಎಂದರು.
ಸಂಗೀತ ಶಿಬಿರ ಎಂದರೆ ಆರೋಗ್ಯ ಶಿಬಿರ ಇದ್ದಂತೆ. ಅನೇಕ ರೋಗಗಳಿಗೆ ಇಲ್ಲಿ ಔಷಧ ಸಿಗಬಲ್ಲುದು. ಮನುಷ್ಯರು ಮಾತ್ರವಲ್ಲ, ಮರ ಗಿಡಗಳು ಕೂಡಾ ಸಂಗೀತವನ್ನು ಆಲಿಸುತ್ತವೆ ಎಂದು ಹೇಳಲಾಗುತ್ತದೆ. ಅದು ಸಂಗೀತದ ಶಕ್ತಿಗೆ ಹಿಡಿದ ಕನ್ನಡಿ ಎಂದು ಅವರು ಹೇಳಿದರು.
ಮಂಗಳೂರು ಸ್ಮಾರ್ಟ್ ಸಿಟಿ ಯೋಜನೆಯ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ, ವಿದ್ವಾನ್ ನೈಬಿ ಪ್ರಭಾಕರ್, ಸ್ವರ ಲಯ ಸಾಧನಾ ಫೌಂಡೇಷನ್ ಉಪಾಧ್ಯಕ್ಷ ರಮೇಶ್ ಭಟ್, ಕೃಷ್ಣರಾಜ್ ಮಯ್ಯ ಭಾಗವಹಿಸಿದ್ದರು. ವಿಶ್ವಾಸ್ ಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಕೃಷ್ಣ ಭಟ್ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.