ADVERTISEMENT

‘ಮತಾಂತರ, ಗೋಹತ್ಯೆಗೆ ಅವಕಾಶ ನೀಡೆವು’: ವಿದ್ಯಾನಂದ ಸರಸ್ವತಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2023, 14:10 IST
Last Updated 7 ಜೂನ್ 2023, 14:10 IST
ವಿದ್ಯಾನಂದ ಸರಸ್ವತಿ ಮಾತನಾಡಿದರು. ಮಹಾಬಲೇಶ್ವರ ಸ್ವಾಮೀಜಿ, ಶಿವಜ್ಞಾನಮಯಿ ಸರಸ್ವತಿ ಮತ್ತು ಸಾಯಿ ಈಶ್ವರ್ ಗುರೂಜಿ ಇದ್ದಾರೆ
ವಿದ್ಯಾನಂದ ಸರಸ್ವತಿ ಮಾತನಾಡಿದರು. ಮಹಾಬಲೇಶ್ವರ ಸ್ವಾಮೀಜಿ, ಶಿವಜ್ಞಾನಮಯಿ ಸರಸ್ವತಿ ಮತ್ತು ಸಾಯಿ ಈಶ್ವರ್ ಗುರೂಜಿ ಇದ್ದಾರೆ    

ಮಂಗಳೂರು: ‘ರಾಜ್ಯದಲ್ಲಿ ಮತಾಂತರ ಮತ್ತು ಗೋಹತ್ಯೆಗೆ ಅವಕಾಶ ನೀಡುವುದಿಲ್ಲ. ಅಲ್ಪಸಂಖ್ಯಾತರ ಮತಕ್ಕಾಗಿ ಬಹುಸಂಖ್ಯಾತರ ಮೇಲೆ ಆಕ್ರಮಣ ಮಾಡಿದರೆ ಸಹಿಸುವುದಿಲ್ಲ’ ಎಂದು ಅಖಿಲ ಭಾರತೀಯ ಸಂತ ಸಮಿತಿ ಕರ್ನಾಟಕ ಘಟಕದ ಪ್ರದೇಶ ಪ್ರಮುಖ್, ಮಂಗಳೂರಿನ ವಿದ್ಯಾನಂದ ಸರಸ್ವತಿ ಎಚ್ಚರಿಕೆ ನೀಡಿದರು.

 ‘ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಮೇಲೆ ಅಪಾರ ಗೌರವ ಇದೆ. ನಾವು ಯಾವ ಪಕ್ಷದ ಬೆಂಬಲಿಗರಲ್ಲ. ಆದರೆ ಗೋ ಹತ್ಯೆ ಮತ್ತು ಮತಾಂತರ ನಿಷೇಧ ಕಾಯ್ದೆ ವಾಪಸ್ ತೆಗೆದುಕೊಳ್ಳುವುದರ ಕುರಿತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಹೇಳುತ್ತಿದ್ದಾರೆ. ಇದು ಸೌಹಾರ್ದ ವಾತಾವರಣ ಕೆಡಿಸಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ’  ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಕರ್ನಾಟಕದಲ್ಲಿ 4 ಸಾವಿರ ಹಿಂದೂ ಮಠಗಳು ಮತ್ತು 27 ಸಾವಿರ ಸನ್ಯಾಸಿಗಳಿದ್ದು, ಪ್ರತಿ ಮಠಗಳಿಗೆ ಸಂತ ಸಮಿತಿಯ ಪ್ರತಿನಿಧಿಗಳು ಭೇಟಿ ನೀಡುತ್ತಿದ್ದಾರೆ. 9 ಜಿಲ್ಲೆಗಳಲ್ಲಿ ಮಠಗಳ ಭೇಟಿ ಕಾರ್ಯ ಮುಕ್ತಾಯಗೊಂಡಿದೆ. ರಥ ಯಾತ್ರೆ ಮತ್ತು ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಯೋಜನೆ ಇದೆ ಎಂದು ಅವರು ತಿಳಿಸಿದರು.

ADVERTISEMENT

ಸಂತ ಸಮಿತಿಯು ಶಿಕ್ಷಣ ಮಂಡಳಿಯನ್ನು ಸ್ಥಾಪಿಸಿ ಒಂದನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗಿನ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಿದೆ. ಮನೆ ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದೆ. ಭಜನಾ ಮಂದಿರಗಳಲ್ಲಿ ಶಿಬಿರಗಳನ್ನು ನಡೆಸಲಿದೆ ಎಂದು ಅವರು ಮಾಹಿತಿ ನೀಡಿದರು. 

ಮಹಾಬಲೇಶ್ವರ ಸ್ವಾಮೀಜಿ, ಸಾಯಿ ಈಶ್ವರ್ ಗುರೂಜಿ, ಶಿವಜ್ಞಾನಮಯಿ ಸರಸ್ವತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.