ADVERTISEMENT

ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಹಬ್ಬದ ಸಂಭ್ರಮ: ಪರಿವರ್ತನೆ ಕೇಂದ್ರವಾದ ದೇವಸ್ಥಾನ

ಖಾವಂದರಿಗೆ ನ್ಯಾಯಮೂರ್ತಿ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2022, 4:01 IST
Last Updated 14 ಆಗಸ್ಟ್ 2022, 4:01 IST
ಕಾರ್ಯಕ್ರಮವನ್ನು ಸಂಸದ ವೀರೇಂದ್ರ ಗೆಗ್ಗಡೆ ಉದ್ಘಾಟಿಸಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್‌.ಅಬ್ದುಲ್ ನಜೀರ್, ಎಸ್‌ಡಿಎಂ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಸತೀಶ್‌ಚಂದ್ರ, ಪ್ರಾಂಶುಪಾಲ ತಾರಾನಾಥ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಆರ್‌.ಬಲ್ಲಾಳ್‌ ಇದ್ದಾರೆ
ಕಾರ್ಯಕ್ರಮವನ್ನು ಸಂಸದ ವೀರೇಂದ್ರ ಗೆಗ್ಗಡೆ ಉದ್ಘಾಟಿಸಿದರು. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್‌.ಅಬ್ದುಲ್ ನಜೀರ್, ಎಸ್‌ಡಿಎಂ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಸತೀಶ್‌ಚಂದ್ರ, ಪ್ರಾಂಶುಪಾಲ ತಾರಾನಾಥ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಆರ್‌.ಬಲ್ಲಾಳ್‌ ಇದ್ದಾರೆ   

ಮಂಗಳೂರು: ಸಣ್ಣ ಪಟ್ಟಣವೊಂದನ್ನು ಶೈಕ್ಷಣಿಕ ಹಬ್ ಆಗಿ ಮಾಡಿದ ಮತ್ತು ದೇವಸ್ಥಾನವನ್ನು ಸಾಮಾಜಿಕ ಪರಿವರ್ತನೆಯ ಕೇಂದ್ರವನ್ನಾಗಿ ಮಾರ್ಪಡಿಸಿದ ಕಿರ್ತಿ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಸಲ್ಲುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎಸ್‌.ಅಬ್ದುಲ್ ನಜೀರ್ ಹೇಳಿದರು.

ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಶನಿವಾರ ನಡೆದ ಕಾನೂನು ಹಬ್ಬ ಉದ್ಘಾಟಿಸಿ ಬೆಳ್ಳಿಹಬ್ಬದ ದತ್ತಿ ಉಪನ್ಯಾಸ ನೀಡಿದ ಅವರು ಅನ್ನ, ಅಭಯ, ಔಷಧ ಮತ್ತು ವಿದ್ಯೆ ಎಂಬ ಚತುರ್ದಾನವನ್ನು ಮಾಡಿ ವೀರೇಂದ್ರ ಹೆಗ್ಗಡೆಯವರು ಗಮನ ಸೆಳೆದಿದ್ದಾರೆ. ಈ ಮೂಲಕ ಸಾಮಾಜಿಕ ಬದ್ಧತೆಗೆ ಉದಾಹರಣೆಯಾಗಿ ನಿಂತಿದ್ದಾರೆ ಎಂದರು.

ದೇವಸ್ಥಾನಗಳು ಮತ್ತು ನಂಬಿಕೆ–ಆಚರಣೆಗಳು ಜಾತಿ–ಧರ್ಮವನ್ನು ಮೀರಿದ್ದು ಎಂಬುದು ಧರ್ಮಸ್ಥಳದಲ್ಲಿ ಸಾಬೀತಾಗಿದೆ. ಗ್ರಾಮೀಣಾಭಿವೃದ್ಧಿಗಾಗಿ ಅವಿರತ ದುಡಿದಿರುವ ವೀರೇಂದ್ರ ಹೆಗ್ಗಡೆಯವರು ಸಾಮೂಹಿಕ ವಿವಾಹಗಳ ಮೂಲಕ ವರದಕ್ಷಣೆ ಪಿಡುಗು ಮತ್ತು ಹಣ ಪೋಲು ಪಾಡುವುದನ್ನು ತಡೆದಿದ್ದಾರೆ ಎಂದು ಎಸ್‌ಡಿಎಂ ಕಾಲೇಜಿನ ಹಳೆಯ ವಿದ್ಯಾರ್ಥಿಯೂ ಆಗಿರುವ ಅಬ್ದುಲ್ ನಜೀರ್ ಅಭಿಪ್ರಾಯಪಟ್ಟರು.

ADVERTISEMENT

ವೀರೇಂದ್ರ ಹೆಗ್ಗಡೆಯವರು ಮಾತನಾಡಿ ಕಾನೂನು ವಿಷಯವನ್ನು ಗಂಭೀರವಾಗಿ ಅಧ್ಯಯನ ಮಾಡಲು ಯುವ ಪೀಳಿಗೆ ಮುಂದಾಗಬೇಕು, ದೇಶದಲ್ಲಿ ಅತ್ಯುತ್ತಮ ನ್ಯಾಯಾಧೀಶರು ಮತ್ತು ವಕೀಲರು ಇದ್ದು ಅವರಿಂದಾಗಿ ಕಾನೂನಿನ ಮೇಲೆ ಗೌರವ ಮತ್ತು ವಕೀಲಿ ವೃತ್ತಿ ಬಗ್ಗೆ ಪ್ರೀತಿ ಮೂಡಿದೆ ಎಂದರು.

ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಂ.ಆರ್‌.ಬಲ್ಲಾಳ್‌, ಪ್ರಾಂಶುಪಾಲ ತಾರಾನಾಥ, ಎಸ್‌ಡಿಎಂ ಶಿಕ್ಷಣ ಸೊಸೈಟಿಯ ಕಾರ್ಯದರ್ಶಿ ಸತೀಶ್‌ಚಂದ್ರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.