ಉಳ್ಳಾಲ: ಬಾಲಕ ದಿಗಂತ್ ನಾಪತ್ತೆ ಸಂದರ್ಭದಲ್ಲಿ ಜಿಲ್ಲೆಯ ವಾತಾವರಣವನ್ನು ಕೆಡಿಸಲು ಯತ್ನಿಸಿದವರು ಹಾಗೂ ಧಾರ್ಮಿಕ ಕಾರ್ಯಕ್ರಮದ ವೇಳೆ ಅಶಾಂತಿಯ ವಾತಾವರಣ ಸೃಷ್ಟಿಸಲು ಯತ್ನಿಸಿದ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಬಂಟ್ವಾಳ ಹಾಗೂ ಉಳ್ಳಾಲ ಪೊಲೀಸ್ ಠಾಣೆಗಳಿಗೆ ಎಸ್ಡಿಪಿಐ ದೂರು ನೀಡಲಿದೆ ಎಂದು ಎಸ್ಡಿಪಿಐ ಫರಂಗಿಪೇಟೆ ಬ್ಲಾಕ್ ಕಾರ್ಯದರ್ಶಿಯಾಗಿರುವ ಪುದು ಗ್ರಾಮ ಪಂಚಾಯಿತಿ ಸದಸ್ಯ ಮೊಹಮ್ಮದ್ ಶಾಫಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರವೂ ಕಠಿಣ ಕಾಯ್ದೆಗಳ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಬೇಕು. ದಿಗಂತ್ ನಾಪತ್ತೆ ಪ್ರಕರಣದಲ್ಲಿ ಸಂಘ ಪರಿವಾರ ಹಾಗೂ ಬಿಜೆಪಿ ಮುಖಂಡರು, ಶಾಸಕರ ವಿರುದ್ಧ ಹಾಗೂ ‘ಕೊರಗಜ್ಜನ ಕಡೆ ನಮ್ಮ ನಡೆ’ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ನೀಡಿರುವ ಪ್ರಚೋದನಾತ್ಮಕ ಹೇಳಿಕೆ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದರು.
ಊರಿನ ಒಗ್ಗಟ್ಟನ್ನು ಮುರಿಯಲು ಹೊರಗಿನಿಂದ ಬಂದ ಸಂಘ ಪ್ರೇರಿತ ಶಕ್ತಿಗಳು, ಅಮ್ಮೆಮಾರ್ ಪ್ರದೇಶದ ಬಹುತೇಕ ಮುಸ್ಲಿಮರು ಗಾಂಜಾ ವ್ಯಸನಿಗಳು ಎಂದು ಮಾಡಿದ್ದಾರೆ. ಊರಿನ ಬಾಲಕನಿಗಾಗಿ ಸ್ಥಳೀಯ ಮುಸ್ಲಿಂ ವ್ಯಾಪಾರಿಗಳು ಬಂದ್ಗೆ ಬೆಂಬಲ ಸೂಚಿಸಿ ವ್ಯಾಪಾರ ಬಂದ್ ಮಾಡಿದ್ದಾರೆ. ಸ್ಥಳೀಯರು ಒಗ್ಗಟ್ಟಿನಲ್ಲಿದ್ದರೆ ಹೊರಗಿನ ಶಕ್ತಿಗಳು ಇಲ್ಲಿಗೆ ಬಂದು ಉದ್ರೇಕಕಾರಿ ಮಾತನಾಡುತ್ತಾರೆ ಎಂದರು.
ಅಡ್ಯಾರ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಯಾಸೀನ್ ಅರ್ಕುಳ, ಬಶೀರ್ ಎಸ್. ಎಂ, ನಝೀರ್ ಫರಂಗಿಪೇಟೆ, ಇಮ್ತಿಯಾಝ್ ಕೋಟೆಪುರ, ಬಶೀರ್ ಫರಂಗಿಫೇಟೆ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.