ADVERTISEMENT

‌ಬಂಟ್ವಾಳ| ಬಡವರ ಸೇವೆ ದೇವರ ಆರಾಧನೆಗೆ ಸಮಾನ: ಮಾಣಿಲ ಶ್ರೀ

​ಪ್ರಜಾವಾಣಿ ವಾರ್ತೆ
Published 6 ಜೂನ್ 2025, 15:14 IST
Last Updated 6 ಜೂನ್ 2025, 15:14 IST
ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿ ಬಡಕುಟುಂಬದ ಸೋಮಶೇಖರ -ಸುಶೀಲ ದಂಪತಿಗೆ ನೂತನ ಮನೆಯ ಕೀಲಿಕೈಯನ್ನು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹಸ್ತಾಂತರಿಸಿದರು
ಬಂಟ್ವಾಳ ತಾಲ್ಲೂಕಿನ ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿ ಬಡಕುಟುಂಬದ ಸೋಮಶೇಖರ -ಸುಶೀಲ ದಂಪತಿಗೆ ನೂತನ ಮನೆಯ ಕೀಲಿಕೈಯನ್ನು ಮಾಣಿಲ ಮೋಹನದಾಸ ಪರಮಹಂಸ ಸ್ವಾಮೀಜಿ ಹಸ್ತಾಂತರಿಸಿದರು   

‌ಬಂಟ್ವಾಳ: ಸಮಾಜದಲ್ಲಿ ಬಡಜನರ ಸೇವೆ ದೇವರ ಆರಾಧನೆಗೆ ಸಮಾನವಾಗಿದ್ದು, ಬಡ ಕುಟುಂಬಕ್ಕೆ ದಾನಿಗಳ ನೆರವಿನಲ್ಲಿ ಹೊಸ ಮನೆ ನಿರ್ಮಿಸಿ ಕೊಟ್ಟಿರುವ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಕುಲಾಲ್ ಅವರ ಪರಿಶ್ರಮ ಮಾದರಿಯಾಗಿದೆ ಎಂದು ಮಾಣಿಲ ಶ್ರೀಧಾಮದ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಇಲ್ಲಿನ ಪಂಜಿಕಲ್ಲು ಗ್ರಾಮದ ಕುಂಜರಬೆಟ್ಟು ಎಂಬಲ್ಲಿ ಬಡಕುಟುಂಬದ ಸೋಮಶೇಖರ -ಸುಶೀಲ ದಂಪತಿಗೆ ನೂತನ ಮನೆಯ ಕೀಲಿ ಹಸ್ತಾಂತರಿಸಿ ಅವರು ಆಶೀರ್ವಚನ ನೀಡಿದರು.

‌ದಾನಿಗಳನ್ನು ಸ್ವಾಮೀಜಿ ಗೌರವಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್, ಯೋಜನಾಧಿಕಾರಿ ಪಿ.ಜಯಾನಂದ, ಮೇಲ್ವಿಚಾರಕ ಬಾಬು, ಬಂಟ್ವಾಳ ಲಯನ್ಸ್ ಕ್ಲಬ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ, ಕೋಶಾಧಿಕಾರಿ ದೇವಪ್ಪ ಪೂಜಾರಿ, ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ ಗಾಣಿಗ, ಪಂಜಿಕಲ್ಲು ಗ್ರಾ.ಪಂ. ಅಧ್ಯಕ್ಷೆ ನಳಿನಿ ಪ್ರಸಾದ್ ಗಾಣಿಗ, ಮೆಸ್ಕಾಂ ಕಿರಿಯ ಎಂಜಿನಿಯರ್ ತಿಲಕ್ ಮಾತನಾಡಿದರು.

ADVERTISEMENT

ಉದ್ಯಮಿ ನವೀನ್ ಗಾಣಿಗ ಮಾಣಿಮಜಲು, ನವೀನ್ ಕುಂಜರಬೆಟ್ಟು, ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಮೋಹನ್ ಅಣ್ಣಳಿಕೆ, ಸಿರಿಲ್ ಕಾರ್ಲೊ ಭಾಗವಹಿಸಿದ್ದರು. ಸಂಘಟಕ ದೇವಪ್ಪ ಕುಲಾಲ್ ಪಂಜಿಕಲ್ಲು ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಮೋಹನ್ ಕೆ.ಶ್ರೀಯಾನ್ ರಾಯಿ ವಂದಿಸಿದರು.

ಕಳೆದ 10 ವರ್ಷಗಳಿಂದ ಸೋಮಶೇಖರ್- ಸುಶೀಲ ದಂಪತಿ ಹಂದಿ ಸಾಕಾಣಿಕೆ ಗೂಡಿನಲ್ಲಿ ಟಾರ್ಪಾಲ್‌ ಹಾಸಿ ಗುಡಿಸಲು ನಿರ್ಮಿಸಿ ಜೀವನ ನಡೆಸುತ್ತಿದ್ದರು. ಅವರ ಎರಡನೇ ಪುತ್ರ ಗಣೇಶ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಪಂಜಿಕಲ್ಲು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್‌ಎಸ್ಎಲ್‌ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ್ದರು.

ವಿದ್ಯಾರ್ಥಿಯನ್ನು ಅಭಿನಂದಿಸಲು ಮನೆಗೆ ತೆರಳಿದ್ದ ದೇವಪ್ಪ ಕುಲಾಲ್ ಅವರು ಅಲ್ಲಿನ ದುಃಸ್ಥಿತಿ ಕಂಡು ದಾನಿಗಳ ನೆರವಿನಲ್ಲಿ ಹೊಸ ಮನೆ ನಿರ್ಮಿಸಿದ್ದಾರೆ.

ಮೆಸ್ಕಾಂ ಕಿರಿಯ ಎಂಜಿನಿಯರ್ ತಿಲಕ್ ಅವರು ಉಚಿತ ವಿದ್ಯುತ್ ಸಂಪರ್ಕ, ಮುಖಂಡ ಬಿ.ರಮಾನಾಥ ರೈ ನೆರವು ನೀಡಿದ್ದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಂಟ್ವಾಳ ಲಯನ್ಸ್ ಕ್ಲಬ್ ಬಂಟ್ವಾಳ, ಹೋಟೆಲ್‌ ಉದ್ಯಮಿ ಮೋಹನ್ ಅಣ್ಣಳಿಕೆ, ಸಿರಿಲ್ ಕಾರ್ಲೊ, ಡಾಕಯ್ಯ ಪೂಜಾರಿ, ಗಿರಿಯಪ್ಪ ಪೂಜಾರಿ ನೂಜಂತ್ತೋಡಿ, ನವೀನ್ ಸಪಲ್ಯ ಕುಂಜರಬೆಟ್ಟು, ಹರೀಶ್ ಕುದನೆ, ನವೀನ್ ಗಾಣಿಗ ಮಾಣಿಮಜಲು, ಸಂತೋಷ್ ಅಮೈ, ಸುಮಿತ್ ಕುಲಾಲ್ ಸೊರ್ನಾಡ್‌ ಸ್ಪಂದಿಸಿದ್ದಾರೆ. ಅರ್ಚಕ ರಾಧಾಕೃಷ್ಣ ಭಟ್ ಪೆದಮಲೆ ಅವರು ಗೃಹಪ್ರವೇಶ ಮತ್ತು ಗಣಹೋಮ ಪೂಜೆಯನ್ನು ಉಚಿತವಾಗಿ ನೆರವೇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.