ಬೆಳ್ತಂಗಡಿ: ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು - ಕರಂಬಾರು ನೇತೃತ್ವದಲ್ಲಿ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ ಹಾಗೂ ಯುವವಾಹಿನಿ ಸಂಚಾಲನಾ ಸಮಿತಿ ಶಿರ್ಲಾಲು ಕರಂಬಾರು ಸಹಕಾರದಲ್ಲಿ ಈ ವರ್ಷದ ಕ್ರೀಡಾಕೂಟ ‘ಕೆಸರ್ದ ಕಂಡೊಡು ಪರ್ಬೊದ ಗೊಬ್ಬು’ ಕ್ರೀಡಾಕೂಟ ಹೆಸರಿನಲ್ಲಿ ಅ.19ರಂದು ಕಟ್ರಬೈಲು ಆನಂದ ಪೂಜಾರಿ ಅವರ ಗದ್ದೆಯಲ್ಲಿ ನಡೆಯಲಿದೆ.
ಕಬಡ್ಡಿ, ವಾಲಿಬಾಲ್, ಹಗ್ಗ ಜಗ್ಗಾಟ, ಥ್ರೋಬಾಲ್, ಓಟ, ಕಪ್ಪೆ ನೆಗೆತ ಸ್ಪರ್ಧೆ, ಲಿಂಬೆ ಚಮಚ ಓಟ, ಹಾಳೆ ಓಟ, ಉಪ್ಪಿನ ಮುಡಿ ಓಟ ನಡೆಯಲಿವೆ.
ಕೆಸರು ಗದ್ದೆ ಕ್ರೀಡಾಕೂಟವನ್ನು ಬೆಳ್ತಂಗಡಿ ತಾಲ್ಲೂಕು ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ಚಂದ್ರಶೇಖರ್ ಸೂರ್ಲೋಡಿ ಉದ್ಘಾಟಿಸಲಿದ್ದು, ಬ್ರಹ್ಮ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಶಿರ್ಲಾಲು - ಕರಂಬಾರು ಅಧ್ಯಕ್ಷ ಸದಾಶಿವ ಪೂಜಾರಿ ಊರ ಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿಕ ಸುಂದರ ಪೂಜಾರಿ ಕಲ್ಲಾಜೆ, ಬೆಳ್ತಂಗಡಿ ಬೆಸ್ಟ್ ಫೌಂಡೇಷನ್ ಅಧ್ಯಕ್ಷ ರಕ್ಷಿತ್ ಶಿವರಾಂ, ಶಿರ್ಲಾಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುಧೀರ್ ಸುವರ್ಣ, ಆನಂದ ಪೂಜಾರಿ ಕಟ್ರಬೈಲು ಭಾಗವಹಿಸುವರು.
ಕೆಸರು ಗದ್ದೆ ಕೇವಲ ಕ್ರೀಡೆಗೆ ಸೀಮಿತವಲ್ಲ. ಕ್ರೀಡೆ ಒಂದು ಭಾಗವಾಗಿದ್ದು, ಗದ್ದೆ ಉಳಿಯಬೇಕು, ಕೃಷಿ ಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂಬುದು ಸಂಘದ ಹಿತವಾಗಿದೆ. ದೂರದ ಊರಿನಲ್ಲಿರುವ ಅನೇಕರು ಈ ಕ್ರೀಡೆಯಲ್ಲಿ ಭಾಗವಹಿಸಲಿ ಎಂದು ಈ ಬಾರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಆಯೋಜನೆ ಮಾಡಿದ್ದೇವೆ ಎಂದು ಸದಾಶಿವ ಪೂಜಾರಿ ಊರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.