ADVERTISEMENT

ಬಂಟ್ವಾಳ: ಪುರಾತನ ಶಿವಲಿಂಗ ಪತ್ತೆ

ಪಾಳು ಬಿದ್ದ ಕಾಪು ಉಮಾಮಹೇಶ್ವರ ಕ್ಷೇತ್ರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2022, 7:54 IST
Last Updated 11 ಜನವರಿ 2022, 7:54 IST
ಪಚ್ಚೇರುಪಲ್ಕೆ ಎಂಬಲ್ಲಿ ಶಿವಲಿಂಗಕ್ಕೆ ಭಕ್ತರು ಸೀಯಾಳ ಅಭಿಷೇಕ ಸಲ್ಲಿಸಿದರು.
ಪಚ್ಚೇರುಪಲ್ಕೆ ಎಂಬಲ್ಲಿ ಶಿವಲಿಂಗಕ್ಕೆ ಭಕ್ತರು ಸೀಯಾಳ ಅಭಿಷೇಕ ಸಲ್ಲಿಸಿದರು.   

ಬಂಟ್ವಾಳ: ಇಲ್ಲಿನ ವಾಮದಪದವು ಸಮೀಪದ ಅಜ್ಜಿಬೆಟ್ಟು ಗ್ರಾಮದ ಕಾಪು ಗುಡ್ಡ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಶಿವಾಲಯದ ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ಭಕ್ತರು ಒಟ್ಟು ಸೇರಿ ಭಜನೆ ನಡೆಸುತ್ತಿದ್ದರು. ಇಲ್ಲಿಗೆ ಸಮೀಪದಲ್ಲೇ ಸೋಮವಾರ ಪುರಾತನ ಶಿವಲಿಂಗ ಪತ್ತೆಯಾಗಿದ್ದು, ಭಕ್ತರಲ್ಲಿ ಸಂತಸಕ್ಕೆ ಕಾರಣವಾಗಿದೆ.

ಈಚೆಗಷ್ಟೇ ನಡೆಸಿದ ಅಷ್ಟಮಂಗಳ ಪ್ರಶ್ನಾ ಚಿಂತನೆಯಲ್ಲಿ ದೇವಸ್ಥಾನ ಹಲವು ವರ್ಷಗಳಿಂದ ಪಾಳು ಬಿದ್ದಿರುವುದು ಭಕ್ತರ ಗಮನಕ್ಕೆ ಬಂದಿತ್ತು. ಇದಕ್ಕಾಗಿ ಸ್ಥಳೀಯ ಪಚ್ಚೇರುಪಲ್ಕೆ ರಾಮಣ್ಣ ಮೂಲ್ಯ ಎಂಬುವರ ಜಮೀನಿನಲ್ಲಿ ಉತ್ಖನನ ನಡೆಸಿದಾಗ ಈ ಶಿವಲಿಂಗ ಪತ್ತೆಯಾಗಿದೆ. ಈ ಸಂದರ್ಭದಲ್ಲಿ ಅಪಾರ ಮಂದಿ ಭಕ್ತರು ಶಿವಲಿಂಗಕ್ಕೆ ಸೀಯಾಳ ಅಭಿಷೇಕ ನಡೆಸಿ ಸಂತಸಪಟ್ಟರು.

ವೇಣೂರು ಅಜಿಲಸೀಮೆ ಮಾಗಣೆಗೆ ಸಂಬಂಧಪಟ್ಟ 4 ಶಿವ ಕ್ಷೇತ್ರಗಳ ಪೈಕಿ ಈ ಶಿವಾಲಯ ಕೂಡಾ ಒಂದು. ಇಲ್ಲಿನ ಅಜ್ಜಿಬೆಟ್ಟು, ಚೆನ್ನೈತ್ತೋಡಿ, ಪಿಲಿಮೊಗರು, ಕುಡಂಬೆಟ್ಟು, ಮೂಡುಪಡುಕೋಡಿ, ಪಿಲಾತಬೆಟ್ಟು, ಇರ್ವತ್ತೂರು ಹೀಗೆ 7 ಗ್ರಾಮಗಳ ಭಕ್ತರ ಆರಾಧನಾ ಕ್ಷೇತ್ರವಾಗಿದೆ ಎಂದು ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಪ್ರಕಾಶ್ಚಂದ್ರ ಆಳ್ವ ವಾಂಬೆಟ್ಟು ತಿಳಿಸಿದ್ದಾರೆ.

ADVERTISEMENT

ತಂತ್ರಿ ಶ್ರೀಪಾದ ಪಾಂಗಣ್ಣಾಯ ಮಾರ್ಗದರ್ಶನದಲ್ಲಿ ಶಿವಲಿಂಗಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.