ಮೂಲ್ಕಿ: ಮರಾಠಿ ಸಂಘವು ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಸಂಘವು ಬೆಳೆದು ಸಮಾಜ ಬಾಂಧವರ ಕಷ್ಟಕ್ಕೆ ಸಹಾಯ ಆಗಲಿ ಎಂದು ಸಾಮಾಜಿಕ ಕಾರ್ಯಕರ್ತ ಶೇಖರ ಕಡ್ತಲ ಹೇಳಿದರು.
ಗಂಜಿಮಠದಲ್ಲಿರುವ ಮಂಗಳೂರು ತಾಲ್ಲೂಕು ಮರಾಠಿ ಸಮಾಜ ಸೇವಾ ಸಂಘದ ವಾರ್ಷಿಕ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಸಭೆ, ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಮಾಜದ ಸಾಧಕರನ್ನು ಗುರುತಿಸಿದಾಗ ಸಮಾಜಕ್ಕೆ ಮರಾಠಿ ಸಮಾಜದ ಕೊಡುಗೆ ಏನು ಎಂಬುದು ಮನವರಿಕೆಯಾಗುತ್ತದೆ ಎಂದರು.
ನಿವೃತ್ತರಾಗಿರುವ ಸಾರಿಗೆ ಅಧಿಕಾರಿ ವಿಶ್ವನಾಥ ನಾಯ್ಕ್, ಯೋಧ ಪ್ರಭಾಕರ ನಾಯ್ಕ್, ವಿಮಾನ ನಿಲ್ದಾಣದ ಸಿಬ್ಬಂದಿ ಕಮಲಾ ಪಿ.ನಾಯ್ಕ್, ಬ್ಯಾಂಕ್ ಅಧಿಕಾರಿ ಸಂಧ್ಯಾ ಜಿ., ಕ್ರೀಡಾಪಟು ನಿಶಿತ್ ನಾಯ್ಕ್ ಅವರನ್ನು ಸನ್ಮಾನಿಸಲಾಯಿತು.
ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ದಿ.ಗುರಿಕಾರ ಪುತ್ತು ನಾಯ್ಕ್ ಮತ್ತು ದಿ.ಕಲ್ಯಾಣಿ ನಾಯ್ಕ್ ಒಡ್ಡೂರು ಸ್ಮರಣಾರ್ಥ ವಿ.ಪಿ.ನಾಯ್ಕ್ ಮಂಗಳೂರು ಅವರ ಕೊಡುಗೆಯಾಗಿ ನಗದು ಬಹುಮಾನ ನೀಡಲಾಯಿತು.
ಮಂಗಳೂರಿನ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಗಂಜಿಮಠ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಾಲತಿ ಎಂ., ಯೋಗ ಶಿಕ್ಷಕಿ ಅಕ್ಕಮ್ಮ, ನಿವೃತ್ತ ಬ್ಯಾಂಕ್ ಅಧಿಕಾರಿ ರೋಹಿಣಿ ಜಿ., ಸಂಘದ ಗೌರವಾಧ್ಯಕ್ಷ ವಿ.ಪಿ.ನಾಯ್ಕ್ ಮಂಗಳೂರು, ಅಧ್ಯಕ್ಷ ಗುಣಪಾಲ ನಾಯ್ಕ್, ಕಾರ್ಯದರ್ಶಿ ಅಶೋಕ್ ನಾಯ್ಕ್ ಮುಚ್ಚೂರು, ಮಹಿಳಾ ಘಟಕದ ಕಾರ್ಯದರ್ಶಿ ನಿವೇದಿತಾ ಬೋರುಗುಡ್ಡೆ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.