ಉಳ್ಳಾಲ: ನಟ ಸೋನು ಸೂದ್ ಫೌಂಡೇಷನ್ ಉಳ್ಳಾಲ ಭಾಗಕ್ಕೆ ಕೊಡುಗೆಯಾಗಿ ನೀಡಿದ ಆಮ್ಲಜನಕ ಘಟಕದ ಯಂತ್ರವನ್ನು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗುರುವಾರ ಬರಮಾಡಿಕೊಳ್ಳಲಾಯಿತು.
ಯಂತ್ರವನ್ನು ಬರಮಾಡಿಕೊಂಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ಮಾತನಾಡಿ, ‘ಸೋನು ಸೂದ್ ಫೌಂಡೇಷನ್ ಜಿಲ್ಲೆಗೆ ನೀಡಿರುವ ಪ್ರಥಮ ಯೋಜನೆಯಿಂದ ಜನತೆಗೆ ಬಹಳಷ್ಟು ಅನುಕೂಲವಾಗಲಿದೆ. ಉಳ್ಳಾಲ ಭಾಗದ ಜನತೆಗೆ ಮುಂದಿನ ದಿನಗಳಲ್ಲಿ ಆಮ್ಲಜನಕ ಹೊರಗಿನಿಂದ ತರುವಂತಹ ಕೆಲಸವಿರುವುದಿಲ್ಲ. ಇಲ್ಲಿ 30-40 ಸಿಲಿಂಡರ್ಆಮ್ಲಜನಕ ಉತ್ಪಾದನೆಯಾಗಲಿದೆ’ ಎಂದು ಹೇಳಿದರು.
‘ಸೋನು ಸೂದ್ ಫೌಂಡೇಷನ್ ಮತ್ತು ಜಿಲ್ಲಾಡಳಿತ ಶೇ 75-25 ರ ಅನುದಾನ ವಿನಿಯೋಗಿಸಿಕೊಂಡು ಘಟಕ ಸ್ಥಾಪನೆ ಮಾಡುತ್ತಿದೆ. ಸೋನು ಸೂದ್ ಫೌಂಡೇಷನ್ ₹ 46 ಲಕ್ಷ ಹಾಗೂ ಜಿಲ್ಲಾಡಳಿತ ₹ 12.88 ಲಕ್ಷ ಘಟಕಕ್ಕೆ ವಿನಿಯೋಗಿಸಿದೆ. ಫೌಂಡೇಷನ್ ಜಿಲ್ಲೆಗೆ ನೀಡುತ್ತಿರುವ ಆರಂಭದ ಕಾರ್ಯ ಇದಾಗಿದೆ. ಜನತೆಗೆ ಜೀವ ವಾಯು ಕೊಡುವಂತಹ ಕಾರ್ಯ ಪುಣ್ಯದ ಕೆಲಸ ಇದಾಗಿದೆ. ಈ ಭಾಗದ ಆಸ್ಪತ್ರೆಗಳಿಗೆ ಸಿಲಿಂಡರ್ ಹೊರಗಿನಿಂದ ನೀಡಬೇಕಿತ್ತು. ಮುಂದಿನ ದಿನಗಳಲ್ಲಿ ಉಳ್ಳಾಲದಲ್ಲಿಯೇ ಆಮ್ಲಜನಕ ಉತ್ಪಾದನೆಯಾಗಲಿದೆ. ಜಿಲ್ಲಾಡಳಿತ ವತಿಯಿಂದ ಆರೋಗ್ಯ ಇಲಾಖೆ ಘಟಕ ನಿರ್ಮಾಣ ಮಾಡಲಿದೆ. ಜಿಲ್ಲಾಡಳಿತದ ವತಿಯಿಂದ ಸೋನು ಸೂದ್ ಅವರಿಗೆ ಧನ್ಯವಾದಗಳು’ ಎಂದು ಹೇಳಿದರು.
ಸೋನು ಸೂದ್ ಫೌಂಡೇಷನ್ ಸದಸ್ಯ ಶ್ರೀಪ್ರಸಾದ್, ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಉಪಾಧ್ಯಕ್ಷ ಐಯೂಬ್ ಮಂಚಿಲ, ಉಳ್ಳಾಲ ನಗರಸಭೆ ಕಮೀಷನರ್ ರಾಯಪ್ಪ, ಆರೋಗ್ಯ ಅಧಿಕಾರಿ ರವಿಕೃಷ್ಣ, ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ವಿದ್ಯಾ ಸಾಗರ್, ಡಾ.ಪ್ರಶಾಂತ್ ,ಸಮುದಾಯ ಆರೋಗ್ಯ ಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಮುಸ್ತಾಫ ಅಬ್ದುಲ್ಲಾ, ಸಮಿತಿ ಸದಸ್ಯರಾದ ರಿಚರ್ಡ್ ಡಿಸೋಜ, ರವಿ ಗಾಂಧಿನಗರ, ಸತ್ಯವತಿ ಬಸ್ತಿಪಡ್ಪು, ನಗರಸಭೆ ಸದಸ್ಯರಾದ ಜಬ್ಬಾರ್ ಮೇಲಂಗಡಿ, ಭಾರತಿ ಎಂ., ಇಬ್ರಾಹಿಂ ಅಶ್ರಫ್, ಅಝೀಝ್ ಕೋಡಿ, ಮುಖಂಡರಾದ ಈಶ್ವರ್ ಉಲ್ಳಾಲ್, ಪ್ರವಿನ್ ತೊಕ್ಕೊಟ್ಟು, ಅಬ್ದುಲ್ ರೆಹಮಾನ್ ಮೇಲಂಗಡಿ, ಯು.ಎಂ ಮನ್ಸೂರ್, ಯುಉ.ಎ ಇಸ್ಮಾಯಿಲ್,
ಡಾ.ತಾರಾ, ಡಾ.ಶಶಿಕಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.